ADVERTISEMENT

ದಲಿತರ ಕಲೆಗೆ ಸಿಗದ ಗೌರವ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:52 IST
Last Updated 17 ಡಿಸೆಂಬರ್ 2012, 6:52 IST

ಮಧುಗಿರಿ: ದಲಿತರ ಬದುಕಿನಂತೆ ದಲಿತರ ಕಲೆಯನ್ನೂ ಉಪೇಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಜೀತ ಪದ್ಧತಿ ತಿರುಳು ಗುಂಪಿನ ಸದಸ್ಯ ಕಿರಣ ಕಮಲ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕು ಜೀವಿಕ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಕ್ತ ಜೀವನ ಸೇವಾ ಸಂಸ್ಥೆ ವತಿಯಿಂದ ಈಚೆಗೆ ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ  ಏರ್ಪಡಿಸಿದ್ದ ಮಿಂಚು- 2012 ರಾಜ್ಯಮಟ್ಟದ ದಲಿತ ಸಂಗೀತ ಜಾನಪದ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮಟೆಯು ದಲಿತರ ಗುಲಾಮಗಿರಿ, ಜೀತ, ಅವಮಾನದ ಸಂಕೇತವಾಗದೆ ಅನ್ಯಾಯದ ವಿರುದ್ಧ ಹೋರಾಡುವ ಆಯುಧವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ದಲಿತ ಸಮಾಜದ ಶೋಷಿತ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ದಲಿತ ಜನಪದ ಕಲೆಗಳು ಸಹಕಾರಿಯಾಗಿವೆ. ಸ್ವಾಭಿಮಾನದ ಬದುಕು ಸಾಗಿಸಲು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಚ್.ಕೆಂಚಮಾರಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂತ ಶಿಶುನಾಳ ಷರೀಫರ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂರ್ತಿ, ಜೀವಿಕ ರಾಜ್ಯ ಸಂಘಟನಾ ಸಂಚಾಲಕ ವಿ.ಗೋಪಾಲ್ ಮಾತನಾಡಿದರು.

ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಎಂ.ಎಲ್.ಗಂಗರಾಜು, ಚಿಕ್ಕಣ್ಣ, ಶ್ರೀಧರ್, ಎನ್.ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಸಾಹಿತಿ ಮ.ಲ.ನ.ಮೂರ್ತಿ, ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ರಂಗಪ್ಪ, ತಾ.ಪಂ. ಸದಸ್ಯರಾದ ಮಂಜುಳಾ ನಾಗರಾಜ್, ಜಿ.ನರಸಿಂಹಯ್ಯ, ಮಂಗಳೂರು ವಿವಿ ಸಹ ಪ್ರಾಧ್ಯಾಪಕ ಎನ್.ನರಸಿಂಹಯ್ಯ, ಡಿಎಸ್‌ಎಸ್‌ನ ಜಿ.ಸಿ.ತಿಮ್ಮಯ್ಯ, ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಮುಖಂಡರಾದ ರಾಜಶೇಖರರೆಡ್ಡಿ, ಪಂಚಾಕ್ಷರಿ, ಪಟೇಲ್ ಸಂಜೀವಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.