ADVERTISEMENT

ದೇಗುಲ ರಸ್ತೆಗೆ ಗಣಿ ಕಂಪೆನಿ ತಡೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 7:30 IST
Last Updated 9 ಸೆಪ್ಟೆಂಬರ್ 2011, 7:30 IST

ಚಿಕ್ಕನಾಯಕನಹಳ್ಳಿ: ಅಬ್ಬಿಗೆ ಬೆಟ್ಟ ಪ್ರದೇಶದ ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಾರ್ವಜನಿಕರು ಹೋಗಲು ಈಗಲೂ ಗಣಿಧಣಿಗಳ ಅಪ್ಪಣೆ ಪಡೆಯಬೇಕಿದೆ.

ಈ  ಭಾಗದ ಗಣಿ ಪ್ರದೇಶದಲ್ಲಿ ಅಬ್ಬಿಗೆ ಗುಡ್ಡ ಸಾಲಿನಲ್ಲಿರುವ ಮಲ್ಲೇಶ್ವರಸ್ವಾಮಿ ದೇವಾಲಯ ಪ್ರಾಮುಖ್ಯತೆ ಪಡೆದಿದೆ.  ಗಣಿ ಚಟುವಟಿಕೆ ಆರಂಭಗೊಂಡ ಮೊದಲಿಗೆ ದೇಗುಲಕ್ಕೆ ಹೋಗಿ ಬರಲು ಭಕ್ತರಿಗೆ ಯಾವುದೇ ಅಡೆತಡೆ ಇರಲಿಲ್ಲ. ನಂತರ  ಗಣಿ ಚಟುವಟಿಕೆ ದೇಗುಲದ ಸಮೀಪಕ್ಕೆ ಬಂದು ನಿಂತಿತ್ತು.

ಎತ್ತರ ಪ್ರದೇಶದ ನೆತ್ತಿಯಲ್ಲಿರುವ ದೇಗುಲದ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಗುಣಮಟ್ಟದ ಕಬ್ಬಿಣದ ಅದಿರು ಇರುವುದರಿಂದ ದೇಗುಲವನ್ನೇ ಸ್ಥಳಾಂತರಿಸುವ ಗಣಿ ಕಂಪನಿಗಳ ಹುನ್ನಾರಕ್ಕೆ ವ್ಯಾಪಕ ಪ್ರತಿಭಟನೆ ಬಂದ ಕಾರಣ ತಡೆ ನೀಡಲಾಯಿತು. 

ದೇಗುಲದ ಸುತ್ತ 200 ಮೀ. ವ್ಯಾಪ್ತಿ ಗಣಿ ಚಟುವಟಿಕೆಗೆ ನಿಷೇಧವಿದೆ. ಅಂದಿನಿಂದ ದೇಗುಲದ ವ್ಯಾಪ್ತಿಯಲ್ಲಿ ಬರುವ  ಸುರೇಂದ್ರನಾಥ್ ಸಿಂಗ್, ಗಣಪತಿಸಿಂಗ್ ಹಾಗೂ ಪೊದ್ದಾರ್ ಮಿನರಲ್ಸ್ ಕಂಪನಿಯವರು ದೇವಾಲಯದ ರಸ್ತೆಯನ್ನು ನಿರ್ಬಂಧಿಸಿ  ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ದೇವಾಲಯಕ್ಕೆ ಬರುವ  ಭಕ್ತರನ್ನು ಇಲ್ಲಿನ  ಭದ್ರತಾ  ಸಿಬ್ಬಂದಿ ತಡೆಯುತ್ತಾರೆ. ನಂತರ ತನ್ನ ಮಾಲಿಕರಿಗೆ ವಾಕಿಟಾಕಿಯಲ್ಲಿ ಸಂಪರ್ಕಿಸಿ ಅವರ ಒಪ್ಪಿಗೆಯ ನಂತರ ಒಳಕ್ಕೆ ಬಿಡುವ ಪರಿಪಾಟ  ಕಳೆದೈದು ವರ್ಷದಿಂದ ಮುಂದುವರೆದಿದೆ.

ಆದರೆ ಈಚೆಗೆ  ಕೇಂದ್ರ ತನಿಖಾ ತಂಡ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಗಣಿ ಅಕ್ರಮಗಳ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ನಂತರ, ಗಣಿ ಚಟುವಟಿಕೆಗೆ ನಿಷೇಧವಿದ್ದರೂ ದೇವಾಲಯಕ್ಕೆ ಹೋಗಲು ಭಕ್ತರಿಗೆ ಗಣಿಧಣಿಗಳ ಪರವಾನಗಿ ಕಡ್ಡಾಯ ವಾಗಿದೆ.

ADVERTISEMENT

ಆದರೆ ಇಲ್ಲಿಗೆ ಪ್ರಕೃತಿ ಸೌಂದರ್ಯ ಸವಿಯುವ ಇಲ್ಲವೆ ಗಣಿ ಪ್ರದೇಶವನ್ನು ವೀಕ್ಷಿಸುವವರಿಗೆ  ಬ್ಲಾಕ್ ಕಮಾಂಡೊ ಮಾದರಿಯ ಭದ್ರತಾ ಸಿಬ್ಬಂದಿ ಒಳಕ್ಕೆ ಬಿಡುವುದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.