ADVERTISEMENT

ಬೆಂಕಿಗೆ ತೆಂಗಿನ ಸಸಿಗಳ ಆಹುತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 10:40 IST
Last Updated 15 ಫೆಬ್ರುವರಿ 2011, 10:40 IST

ಹುಳಿಯಾರು: ಖಾಲಿ ಜಮೀನಿಗೆ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ತೋಟದ ಬದುವಿನ ಮೂಲಕ ತೆಂಗಿನತೋಟಕ್ಕೆ ವ್ಯಾಪಿಸಿ ಸುಮಾರು 60ಕ್ಕೂ ಹೆಚ್ಚು ಫಲ ಬಿಡುವ ಹಂತದ ಸಸಿಗಳಿಗೆ ಹಾನಿಯಾದ ಘಟನೆ ಯಳನಾಡು ಪಕ್ಕದ ಬಳ್ಳೆಕಟ್ಟೆಗುಡ್ಲು ಗ್ರಾಮದಲ್ಲಿ ಸೋಮವಾರ ನಡೆದಿದೆ.ಯಳನಾಡು ತಾ.ಪಂ. ಸದಸ್ಯೆ ಜಯಲಕ್ಷ್ಮೀ ಮಲ್ಲಿಕಾರ್ಜುನಯ್ಯ ಅವರಿಗೆ ಈ ತೋಟ ಸೇರಿದೆ. ತೋಟದ ಪಕ್ಕ ವಿದ್ಯುತ್ ಕಂಬಗಳು ಹಾದು ಹೋಗಿದ್ದು ಶಾರ್ಟ್ ಸಕ್ಯೂರ್ಟ್‌ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಸಂಶಯಿಸಲಾಗಿದೆ.

ತೋಟದ ಪಕ್ಕ ಸುಮಾರು 2-3 ಎಕರೆಯಷ್ಟು ಖಾಲಿ ಜಮೀನು ಇದ್ದು ಅದರಲ್ಲಿ ಸಂಪೂರ್ಣವಾಗಿ ಹುಲ್ಲು ಬೆಳೆದು ಒಣಗಿ ನಿಂತಿತ್ತು. ಮೊದಲು ಹುಲ್ಲಿಗೆ ಬೆಂಕಿ ತಗುಲಿ ಗಾಳಿ ಇದ್ದುದರಿಂದ ತೋಟದ ಬದು ಮತ್ತು ತೋಟಕ್ಕೆ ತಗುಲಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ 60 ತೆಂಗಿನ ಸಸಿಗಳು,  ಕೊಳವೆಬಾವಿಯ ಸ್ಟಾರ್ಟರ್, ಕೇಬಲ್ ಬೆಂಕಿಗೆ ಆಹುತಿಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬಣವೆಗೆ ಬೆಂಕಿ:
  ಯಳನಾಡು ಗ್ರಾ.ಪಂ ವ್ಯಾಪ್ತಿಯ ಮರಾಠಿ ಪಾಳ್ಯದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಬೆಂಕಿ ಆಕಸ್ಮಿಕದಲ್ಲಿ ಹುಲ್ಲಿನ ಬಣವೆ ಬೆಂದು ಹೋಗಿದೆ. ಗ್ರಾಮದ ರಾಮಯ್ಯ ಅವರಿಗೆ ಇದು ಸೇರಿದೆ. ರೂ.10 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.