ADVERTISEMENT

ಶಿವಯೋಗಿಗಳ ನೆಲೆ ಸಿದ್ದಗಂಗೆ

ಅಟವೀ ಸ್ವಾಮೀಜಿ, ಉದ್ಧಾನ ಶಿವಯೋಗಿಗಳ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 7:07 IST
Last Updated 16 ಜನವರಿ 2016, 7:07 IST
ತುಮಕೂರು ಸಿದ್ದಗಂಗಾ ಮಠದಲ್ಲಿ ಶುಕ್ರವಾರ ಅಟವೀ ಸ್ವಾಮೀಜಿ, ಉದ್ದಾನ ಶಿವಯೋಗಿಗಳ ಪುಣ್ಯಾರಾಧನೆ, ಗುರುಸ್ಮರಣೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಭಾವಚಿತ್ರ ಮೆರವಣಿಗೆಯಲ್ಲಿ ಕುಂಭ ಹೊತ್ತು ಮಹಿಳೆಯರು ಸಾಗಿದರು.
ತುಮಕೂರು ಸಿದ್ದಗಂಗಾ ಮಠದಲ್ಲಿ ಶುಕ್ರವಾರ ಅಟವೀ ಸ್ವಾಮೀಜಿ, ಉದ್ದಾನ ಶಿವಯೋಗಿಗಳ ಪುಣ್ಯಾರಾಧನೆ, ಗುರುಸ್ಮರಣೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಭಾವಚಿತ್ರ ಮೆರವಣಿಗೆಯಲ್ಲಿ ಕುಂಭ ಹೊತ್ತು ಮಹಿಳೆಯರು ಸಾಗಿದರು.   

ತುಮಕೂರು: ಶಿವಯೋಗಿ ಪುಂಗವರ ಅದ್ಭುತ ನೆಲೆ ಸಿದ್ದಗಂಗಾಮಠ ಎಂದು ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ಶುಕ್ರವಾರ ನುಡಿದರು.

ಸಿದ್ದಗಂಗಾ ಮಠದಲ್ಲಿ ನಡೆದ ಅಟವೀ ಸ್ವಾಮೀಜಿ 115ನೇ ಮತ್ತು ಉದ್ಧಾನ ಶಿವಯೋಗಿಗಳ 75ನೇ ಪುಣ್ಯಾರಾಧನೆ ಹಾಗೂ ಗುರು ಸ್ಮರಣೆ ಮತ್ತು ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಟವೀ ಶಿವಯೋಗಿಗಳು, ಉದ್ಧಾನ ಶಿವಯೋಗಿಗಳು, ಈಗಿನ ಶಿವಕುಮಾರ ಸ್ವಾಮಿಗಳಿಂದ ಈ ಕ್ಷೇತ್ರ ಶಿವಯೋಗಿ ಪುಂಗವರ ನೆಲೆಯಾಗಿದೆ. ನಾಡಿನಲ್ಲಿ ಅಥಣಿ ವಿಜಯಮಹಾಂತ ಶಿವಯೋಗಿಗಳು, ಅಟವೀ ಶಿವಯೋಗಿಗಳು, ಉದ್ದಾನ ಶಿವಯೋಗಿಗಳು ಹೀಗೆ ಅನೇಕ ಶಿವಯೋಗಿಗಳಿಂದ ನೂರಾರು ವರ್ಷಗಳ ಹಿಂದೆ ಇಡೀ ಸಮಾಜವೇ ಶಿವಯೋಗಿಗಳ ಕೇಂದ್ರವಾಗಿತ್ತು ಎಂದರು.

ಈಗಿನ 108 ವರ್ಷದ ಶಿವಕುಮಾರ ಸ್ವಾಮೀಜಿ ತಮ್ಮ ತಪಸ್ಸು, ಶಕ್ತಿಯಿಂದ ಮನುಕುಲದ ಮಂಗಳ ಜ್ಯೋತಿಯಾಗಿ ಇದ್ದಾರೆ. ಉದ್ದಾನಶ್ರೀ, ಶಿವಕುಮಾರ ಸ್ವಾಮೀಜಿಗಳು ಯುಗದ ಅವತಾರ, ಶತಮಾನದ ಕೌತುಕ ಎಂದು ಹೇಳಿದರು.

ಸಂಕ್ರಾಂತಿ ಹಬ್ಬ ಬೆಳಕಿನೆಡೆಗೆ ನಡೆಯುವ ಹಬ್ಬ. ಇಂಥ ಬೆಳಕಿನಂತೆಯೇ ಈ ಕ್ಷೇತ್ರವು ಲಕ್ಷಾಂತರ ಜನರಿಗೆ ಮಾರ್ಗದರ್ಶನ ಮಾಡಿದೆ. ಸದ್ದು ಗದ್ದಲವಿಲ್ಲದೆ ಈ ಕ್ಷೇತ್ರ ಗದ್ದುಗೆ ಏರಿದೆ ಎಂದರು.

ಸಿದ್ದಗಂಗಾ ಸಂಕ್ರಮಣ ಸಂಚಿಕೆ ಬಿಡುಗಡೆ ಮಾಡಿದ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡಿ, ಅಟವೀಶ್ರೀ, ಉದ್ದಾನಶ್ರೀ ಪವಾಡ ಸದೃಶ ಕೆಲಸ ಮಾಡಿದರು. ಸಾಮಾಜಿಕ, ಶೈಕ್ಷಣಿಕ ಕೆಲಸಗಳು ಅಚ್ಚರಿ ತರುತ್ತವೆ. 1917ರಲ್ಲಿಯೇ ಸಂಸ್ಕೃತ ಅಧ್ಯಯನಕ್ಕೆ ಸಂಸ್ಕೃತ ಶಾಲೆಯನ್ನು ಉದ್ದಾನ ಶಿವಯೋಗಿಗಳು ಸ್ಥಾಪಿಸಿದರು. ಜಾತಿ, ಮತ, ಭೇದ ತೊರೆದರು ಎಂದರು.

ಹಾಸನದ ಉಪನ್ಯಾಸಕ ಡಾ.ಸಿ.ಎಚ್.ಯತೀಶ್ವರ್ ಉಪನ್ಯಾಸ ನೀಡಿ, ಸಿದ್ದಗಂಗಾಮಠ ಆರೋಗ್ಯಯುತ ಸಮಾಜ ಕಟ್ಟುವ ಮಹತ್ವದ ಕಾರ್ಯ ಮಾಡಿದೆ. ಶಿವಶರಣರ ವಿಚಾರ ಧಾರೆಯ ಸಾಕಾರ ಸ್ವರೂಪವಾಗಿದೆ. ಮಠದ ಶೈಕ್ಷಣಿಕ ದಾಸೋಹ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕೆ.ಶಿವರುದ್ರಯ್ಯ ಸ್ವಾಗತಿಸಿದರು. ವೀರಭದ್ರಯ್ಯ ನಿರೂಪಿಸಿದರು.
*
ಅಟವೀಶ್ರೀ, ಉದ್ಧಾನಶ್ರೀ ಪ್ರಶಸ್ತಿ ಪ್ರದಾನ
ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಕೆ.ಬಸಪ್ಪ ಅವರಿಗೆ ಮರಣೋತ್ತರವಾಗಿ ನೀಡಲಾದ ಅಟವೀಶ್ರೀ ಪ್ರಶಸ್ತಿಯನ್ನು  ಅವರ ಪುತ್ರ ಬಿ.ಪ್ರಕಾಶ್ ಸ್ವೀಕರಿಸಿದರು. ಸಿದ್ದಗಂಗಾಮಠದ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಧ್ಯಾಪಕ ಗುರುಬಸವದೇವರು ಅವರಿಗೆ ಮರಣೋತ್ತರವಾಗಿ ನೀಡಿದ ಉದ್ದಾನಶ್ರೀ ಪ್ರಶಸ್ತಿಯನ್ನು ಗುರುಬಸವ ಅವರ ಪತ್ನಿ ಪಾರ್ವತಮ್ಮ ಸ್ವೀಕರಿಸಿದರು. ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.