ADVERTISEMENT

ಶೇಂಗಾ ರಾಜಧಾನಿಯಲ್ಲೇ `ಟೈಂಪಾಸ್‌ಗೆ' ಬ್ರೇಕ್

ಶಿರಾದಲ್ಲಿ ಕುಸಿಯುತ್ತಿದೆ ಶೇಂಗಾ ಬೆಳೆಯ ವಿಸ್ತೀರ್ಣ

ಪ್ರಜಾವಾಣಿ ವಿಶೇಷ
Published 11 ಜೂನ್ 2013, 5:23 IST
Last Updated 11 ಜೂನ್ 2013, 5:23 IST

ಶಿರಾ: ಶೇಂಗಾ ನಾಡಿನಲ್ಲಿ ಮುಂಗಾರು ಹಂಗಾಮಿಗೆ ವಾಡಿಕೆಯಂತೆ ಮಳೆಯಾಗಿದ್ದು, ರೈತರು ಹೊಲದ ಉಳುಮೆ ಹಾಗೂ ಬಿತ್ತನೆ ಕಾರ್ಯದಲ್ಲಿ ಚುರುಕಾಗಿದ್ದಾರೆ.

ತಾಲ್ಲೂಕಿನಲ್ಲಿ ಮೇ, ಜೂನ್‌ನಲ್ಲಿ 11 ಸೆಂಟಿ ಮೀಟರ್ ವಾಡಿಕೆ ಮಳೆಯಾಗಬೇಕಿದ್ದು, 11.2 ಸೆಂ.ಮೀ. ಮಳೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಆ ತಿಂಗಳ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು ಬಿಟ್ಟರೆ ಮೇ-ಜೂನ್‌ನಲ್ಲಿ ವಾಡಿಕೆ ಮಳೆ ಸುರಿಯಲಿಲ್ಲ. ಹೀಗಾಗಿ ಕಳೆದ ವರ್ಷವೂ ಬರಗಾಲವೇ ಆಗಿತ್ತು.

ಈ ಬಾರಿ ಮುಂಗಾರಿನಲ್ಲಿ ವಾಡಿಕೆ ಮಳೆಯಾಗಿದೆ. ಇಷ್ಟಕ್ಕೆ ಖುಷಿಯಾದ ರೈತರು ಮುಂದಿನ ದಿನಗಳಲ್ಲಿ ಸಮೃದ್ಧ ಮಳೆ ನಿರೀಕ್ಷಿಸಿ ಬಿತ್ತನೆ ಚುರುಕುಗೊಳಿಸಿದ್ದಾರೆ. ವಿಪರ್ಯಾಸ ಎಂದರೇ ಶೇಂಗಾ ನಾಡಿನ ರಾಜಧಾನಿ ಎನ್ನಿಸಿದ ಶಿರಾ ತಾಲ್ಲೂಕಿನಲ್ಲೇ ಶೇಂಗಾ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಶೇಂಗಾ ಬಿತ್ತನೆಯ ಹೆಕ್ಟೇರ್‌ವಾರು ಪ್ರದೇಶ ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ.

ಕೃಷಿ ಇಲಾಖೆ 2010-11ನೇ ಸಾಲಿನಲ್ಲಿ 49,800 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿತ್ತು. ಆದರೆ ಬಿತ್ತನೆಯಾಗಿದ್ದು 39,410 ಹೆಕ್ಟೇರ್ ಮಾತ್ರ. 2011-12ನೇ ಸಾಲಿನಲ್ಲಿ ಅದಕ್ಕಿಂತಲೂ ಕಡಿಮೆ 23,750 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆಯಾದರೆ, ಕಳೆದ ವರ್ಷ 2012-13ನೇ ಸಾಲಿನಲ್ಲಿ ಅತ್ಯಂತ ಕಡಿಮೆ 19,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆಯಾಗಿತ್ತು.

ಈ ವರ್ಷ ಮೇ-ಜೂನ್‌ನಲ್ಲಿ ವಾಡಿಕೆಯಷ್ಟು ಮಳೆಯಾಗಿರುವುದರಿಂದ ಕೃಷಿ ಇಲಾಖೆ 49,100 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದೆ. ಇದಕ್ಕಾಗಿ ರೈತರಿಗೆ ವಿತರಿಸಲು ತಾಲ್ಲೂಕಿನ ಐದು ರೈತ ಸಂಪರ್ಕ ಕೇಂದ್ರದಲ್ಲಿ 3295 ಕ್ವಿಂಟಲ್ ಬಿತ್ತನೆ ಶೇಂಗಾ ದಾಸ್ತಾನು ಮಾಡಿದೆ. ಆದರೆ ಈವರೆಗೆ 400 ಕ್ವಿಂಟಲ್ ಶೇಂಗಾ ಮಾತ್ರ ರೈತರು ಖರೀದಿಸಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಶೇಂಗಾ ಕೊಳ್ಳಲು ರೈತರು ಮುಂದಾಗುತ್ತಿಲ್ಲ.

ಇದಕ್ಕೆ ಕಾರಣ ಶೇಂಗಾ ಬೆಳೆಯಿಂದ ರೈತರು ವಿಮುಖರಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಶೇಂಗಾ ವಿತರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡರೂ ಅದು ಮಾರುಕಟ್ಟೆ ದರದಷ್ಟೇ ರೈತರಿಗೆ ಹೊರೆಯಾಗುತ್ತಿದೆ. ಈ ಕಾರಣದಿಂದ ರೈತರು ಬಿತ್ತನೆಗೆ ತಮ್ಮ ಮನೆಯಲ್ಲೇ ಶೇಂಗಾ ಕಾಯ್ದಿರಿಸಿರುತ್ತಾರೆ. ಇಲ್ಲವೇ ನೇರ ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಹೀಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಖರೀದಿ ಕಡಿಮೆ.

ಈ ಹಿಂದೆ ತಾಲ್ಲೂಕಿನಲ್ಲಿ ಶೇಂಗಾ ಬೆಳೆ ಸಮೃದ್ಧಿ ಸಂಕೇತವಾಗಿತ್ತು. ಅಂದರೆ ಈಗಲೂ ಹಲ ಹಳ್ಳಿಗಳಲ್ಲಿ ಒಂದಿಬ್ಬರಾದರೂ ರೈತರು ನಾನು ಈ ಹಿಂದೆ ನೂರು ಕ್ವಿಂಟಲ್ ಶೇಂಗಾ ಬೆಳೆದಿದ್ದೆ ಎಂದು ಹೇಳುವವರು ಕಾಣಸಿಗುತ್ತಾರೆ. ಆದರೆ ಈಗ ಇಡೀ ಊರಿನ ರೈತರೆಲ್ಲ ಸೇರಿ ನೂರು ಕ್ವಿಂಟಲ್ ಶೇಂಗಾ ಬೆಳೆಯುವುದು ದುಸ್ತರದ ಮಾತಾಗಿದೆ.

ಈ ಪರಿ ರೈತರು ಶೇಂಗಾ ಬೆಳೆಯಿಂದ ವಿಮುಖರಾಗಲು ಪ್ರಮುಖ ಕಾರಣಗಳೆಂದರೆ ಬಿತ್ತನೆ ಶೇಂಗಾ ಖರೀದಿ ದುಬಾರಿ, ಅನಿಶ್ಚಿತ ಮಳೆ, ಶೇಂಗಾ ಬೆಳೆಯನ್ನು ಕೀಟ ಹಾಗೂ ರೋಗಬಾಧೆಯಿಂದ ಆರೈಕೆ ಮಾಡುವುದು ಕಷ್ಟ. ಬೇರೆ ಬೆಳೆಗಿಂತ ಶೇಂಗಾ ಬೆಳೆ ನಿರ್ವಹಣೆ ಕಷ್ಟ ಎಂದು ಹೇಳಲಾಗುತ್ತದೆ.
ಇಷ್ಟಾಗಿಯೂ ಕಷ್ಟ ಬಿದ್ದು ಶೇಂಗಾ ಬೆಳೆದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಗ್ಯಾರಂಟಿ. ಅಂದರೆ ಒಂದು ಕ್ವಿಂಟಲ್ ಶೇಂಗಾಗೆ 5500 ರೂಪಾಯಿ ಬೆಲೆ ತೆತ್ತು ರೈತರು ಬಿತ್ತಬೇಕು. ಆದರೆ ರೈತರು ಬೆಳೆದ ಶೇಂಗಾಗೆ ಮಾರುಕಟ್ಟೆಯಲ್ಲಿ ಅದೇ ಒಂದು ಕ್ವಿಂಟಲ್‌ಗೆ ಕೇವಲ 2500 ರೂಪಾಯಿ ಬೆಲೆ ದೊರೆಯುತ್ತದೆ!

ಇದೆಲ್ಲದರಿಂದ ರೋಸಿದ ರೈತರು ಶೇಂಗಾ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. ಇದೆಲ್ಲದರ ಜತೆಗೆ ಶೇಂಗಾ ಬೆಳೆಗಾರರಲ್ಲಿ ಸಂಘಟನೆ ಕೊರತೆ ಇದೆ. ಕಾಫಿ, ಕಬ್ಬು, ರೇಷ್ಮೆ ಬೆಳೆಗಾರರು ಸಂಘಟಿತರಾಗಿ ತಮ್ಮ ಬೆಳೆಗೆ ಉತ್ತಮ ಬೆಲೆ ನೀಡುವಂತೆ ಹೋರಾಟ ನಡೆಸುತ್ತಾರೆ. ಆದರೆ ಶೇಂಗಾ ಬೆಳೆಗಾರರ ಅಂಥ ಹೋರಾಟದ ಪ್ರಯತ್ನವನ್ನು ಮೊಳಕೆಯಲ್ಲೆ ಚಿವುಟ್ಟಿದ್ದು ಇತಿಹಾಸವಾಗಿದೆ.

ಅಂದರೆ ಕಳೆದ ಒಂದೂವರೆ ದಶಕದ ಹಿಂದೆ ಶಿರಾದಲ್ಲಿ ರೈತರು ಶೇಂಗಾ ಬೆಲೆ ಕುಸಿತದಿಂದ ಕಂಗಾಲಾಗಿ ಉಗ್ರ ಪ್ರತಿಭಟನೆಯನ್ನೇ ನಡೆಸಿದ್ದರು. ಆಗ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿ ಐವರು ರೈತರನ್ನು ಸಾಯಿಸುವುದರೊಂದಿಗೆ ಇಡೀ ಹೋರಾಟ ಹತ್ತಿಕ್ಕಿತು. ಅಲ್ಲದೆ ಆ ಹೋರಾಟಕ್ಕೆ ರಾಜಕೀಯ ಮತ್ಸರ, ಮಟ್ಕಾ ದಂಧೆಯ ಕರಾಳ ರೂಪದ ಲೇಪನ ಹಚ್ಚಿ ಶೇಂಗಾ ಮೂಲೆಗುಂಪು ಮಾಡಲಾಯಿತು.

ಹೀಗಾಗಿ ಶೇಂಗಾ ಬೆಳೆಯಿಂದ ವಿಮುಖರಾದ ರೈತರು ಖುಷ್ಕಿ ಜಮೀನುಗಳಿಗೆ ಸುಲಭ ಬೆಳೆಗಳೆನ್ನಿಸಿದ ಸೂರ್ಯಕಾಂತಿ, ತೊಗರಿಯಂಥ ಬೆಳೆಗಳ ಕಡೆಗೆ ವಾಲುತ್ತಿದ್ದಾರೆ. ಆದರೆ ಶೇಂಗಾ ಬೆಳೆಯಿಂದ ಕೇವಲ ರುಚಿಯಾದ ಟೈಂಪಾಸ್ ಕಡ್ಲೆಕಾಯಿ ಮಾತ್ರವಲ್ಲದೆ ಜಾನುವಾರುಗಳಿಗೆ ಉತ್ಕೃಷ್ಟ ಮೇವು ದೊರೆಯುತ್ತಿತ್ತು ಎಂಬುದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.