ADVERTISEMENT

ಸ್ಕೂಲಲ್ ಗುಂಡಿ ತೋಡ್ತೀವಿ....

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 8:25 IST
Last Updated 12 ಆಗಸ್ಟ್ 2011, 8:25 IST
ಸ್ಕೂಲಲ್ ಗುಂಡಿ ತೋಡ್ತೀವಿ....
ಸ್ಕೂಲಲ್ ಗುಂಡಿ ತೋಡ್ತೀವಿ....   

ತುಮಕೂರು: `ಶಿಕ್ಷಣ ಇಲಾಖೆಯವರು ಗುಂಡಿ ತೋಡಿದ್ರೆ ನಾವು ಗಿಡ ಕೊಡ್ತೀವಿ...~ `ಅರಣ್ಯ ಇಲಾಖೆಯವ್ರ ಗಿಡ ಕೊಟ್ರೆ ನಾವು ಗುಂಡಿ ತೋಡ್ತೀವಿ...~

-ಇದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಓ ನಾಗರಾಜ್ ನಾಯ್ಕ ಮತ್ತು ಶಿಕ್ಷಣ ಇಲಾಖೆಯ ಇಬ್ಬರೂ ಡಿಡಿಪಿಐಗಳ ನಡುವೆ ನಡೆದ ಸಂಭಾಷಣೆಯ ತುಣುಕು.

ಗುಂಡಿ ಸತೋಡುವ ಚರ್ಚೆ ಸಾಕಷ್ಟು ಹೊತ್ತು ನಡೆದದ್ದು ಗಮನಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ, `ಗುಂಡಿ ತೋಡಲು ಜೆಸಿಬಿ ಬಳಸಬಹುದು. ಜೆಸಿಬಿಗೆ ಬಾಡಿಗೆ ಪಾವತಿಸಲು ಶಿಕ್ಷಣ ಇಲಾಖೆ ಆಲೋಚಿಸಬೇಕು~ ಎಂದು ಸೂಚಿಸಿದರು.

ಚರ್ಚೆಯ ಹಂತದಲ್ಲಿ ಮಧುಗಿರಿ ಡಿಡಿಪಿಐ ಹುಚ್ಚಯ್ಯ, `ಗುಂಡಿ ತೋಡಲು ದೈಹಿಕ ಶಿಕ್ಷಕರು, ಶಾಲೆ ಮಕ್ಕಳನ್ನು ಬಳಸಿಕೊಳ್ಳಬಹುದು~ ಎಂದು ಸೂಚಿಸಿದರು.

ಈ ಉತ್ತರದಿಂದ ಕೆರಳಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, `ಶಿಕ್ಷಣ ಇಲಾಖೆ ಆಧಿಕಾರಿಗಳ ಧೋರಣೆ ಇನ್ನಾದರೂ ಬದಲಾಗಬೇಕು. ಶಿಕ್ಷಕರಿಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಮಕ್ಕಳನ್ನು ಗುಂಡಿ ತೋಡಲು ಬಳಸಿಕೊಳ್ಳಬಾರದು~ ಎಂದು ಆದೇಶಿಸಿದರು.

ಸಮಸ್ಯೆ ಗುರುತಿಸಿ ಸೂಕ್ತ ಪರಿಹಾರ ಕಂಡುಕೊಳ್ಳ ದಿದ್ದರೆ ಇನ್ನು 10 ವರ್ಷದಲ್ಲಿ ಶಿಕ್ಷಣ ಇಲಾಖೆಯನ್ನೇ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರಿ ಶಾಲೆಯಿಂದ ಮಕ್ಕಳು ದೂರ ಉಳಿಯುತ್ತಿದ್ದಾರೆ. ಶಿಕ್ಷಕರಿಗೆ ಪಾಠ ಹೇಳುವುದು ಬಿಟ್ಟರೆ ಇನ್ಯಾವುದೇ ಹೊರೆ ಇರಬಾರದು. ಸಾಕಷ್ಟು ಸಂಖ್ಯೆಯಲ್ಲಿರುವ ಬಿಆರ್‌ಪಿ, ಸಿಆರ್‌ಪಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಿ~ ಎಂದು ಹೇಳಿದರು.

ಸಂಬಳ ಕೊಡಿ: ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ 20ನೇ ತಾರೀಖಾದರೂ ಶಿಕ್ಷಕರಿಗೆ ಸಂಬಳ ಸಿಗದಿರುವ ಬಗ್ಗೆ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚಮಾರಯ್ಯ, `5ನೇ ತಾರೀಖಿನ ಒಳಗೆ ಸಂಬಳ ನೀಡುವಂತೆ ಒತ್ತಾಯಿಸಿದರು.

ಡಿಡಿಪಿಐ ಹುಚ್ಚಯ್ಯ ಪ್ರತಿಕ್ರಿಯಿಸಿ, `ಬಿಲ್ ಪಾಸಾಗಿದೆ. ಎಲ್ಲೂ ಸಂಬಳ ತಡವಾಗಿಲ್ಲ~ ಎಂದರು. ಈ ಉತ್ತರ ಒಪ್ಪದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ, `ಕೆಲವೆಡೆ ಶಿಕ್ಷಕರಿಗೆ ಸಂಬಳವಾಗಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇನ್ನೊಮ್ಮೆ ಹೀಗೆ ಆಗಬಾರದು. ಸೂಕ್ತ ಸಮಯಕ್ಕೆ ಸಂಬಳ ಬಿಡುಗಡೆ ಮಾಡಲು ನಿಮ್ಮ ಕಚೇರಿಯಲ್ಲಿ ಒಬ್ಬ ನೌಕರನನ್ನು ಮೀಸಲಿಡಿ~ ಎಂದು ಆದೇಶಿಸಿದರು.

ಮುಚ್ಚುವ ಶಾಲೆಗಳು: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 30 ಶಾಲೆಗಳನ್ನು ಮಕ್ಕಳಿಲ್ಲದೆ ಮುಚ್ಚಲಾಗಿದೆ. ಈ ವರ್ಷ 206 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. ಈ ಶಾಲೆಗಳ ಭವಿಷ್ಯದ ಬಗ್ಗೆ ಸರ್ಕಾರದಿಂದ ಸೂಕ್ತ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಮಧುಗಿರಿ ಮತ್ತು ತುಮಕೂರು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.

2010-11ರ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 1ರಿಂದ 7ನೇ ತರಗತಿ ಓದುತ್ತಿರುವ ಮಕ್ಕಳ ಸಂಖ್ಯೆ 40 ಸಾವಿರದಷ್ಟು ಕುಸಿದಿದೆ. ಇವರಲ್ಲಿ ಹಲವು ಮಕ್ಕಳು ಸರ್ಕಾರಿ ಶಾಲೆ ಬಿಟ್ಟು- ಖಾಸಗಿ ಶಾಲೆಗೆ ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಶಿಕ್ಷಕರ ಕೊರತೆ: ಜಿಲ್ಲೆಯ ಪಾವಗಡ, ಕುಣಿಗಲ್ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇದೆ. 27 ಇಂಗ್ಲಿಷ್ ಶಿಕ್ಷಕರೂ ಸೇರಿದಂತೆ 31 ವಿಷಯ ಬೋಧಕರ ಹುದ್ದೆಗಳು ಖಾಲಿಯಿವೆ. ಇಂಥ ಸ್ಥಳಗಳಿಗೆ ಗುತ್ತಿಗೆ ಆಧಾರದ ಮೇಲೆ ದಿನಕ್ಕೆ ರೂ. 150ರಂತೆ ಪಾವತಿಸಿ ಹಂಗಾಮಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಅಕ್ಕಪಕ್ಕ ಶಾಲೆಗಳಿಂದ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಮಧುಗಿರಿ ಡಿಡಿಪಿಐ ಹುಚ್ಚಯ್ಯ ತಿಳಿಸಿದರು.

ಖಾಸಗಿ ಅನುದಾನಿತ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಅನಿವಾರ್ಯ ಕಾರಣಗಳಿಂದ ನಿಯೋಜಿಸಿ ರುವ ಶಿಕ್ಷಕರನ್ನು ಕೆಲವು ಆಡಳಿತ ಮಂಡಳಿಗಳು ಕಳುಹಿಸಿಕೊಟ್ಟಿಲ್ಲ. ಇಂಥ ಶಾಲೆಗಳ ಮೇಲೆ ಕ್ರಮ ಜರುಗಿಸಿ ಎಂದು ಅಧ್ಯಕ್ಷರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಶಿವಯೋಗಿ ಚ.ಕಳಸದ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದರಾವ್, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT