ತುಮಕೂರು: ಕಾಡುಗೊಲ್ಲರ ಆರಾಧ್ಯ ದೈವ ವೀರಗಾರರ ಎಳ್ಳು ಹೊಲದ ಈರಣ್ಣ ದೇವಸ್ಥಾನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹25 ಲಕ್ಷ ನೆರವು ನೀಡುವುದಾಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ಗೌಡ ಭರವಸೆ ನೀಡಿದರು.
ತಾಲ್ಲೂಕಿನ ಬೆಳ್ಳಾವಿ ಹೋಬಳಿ ಸೋರೆಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚು ಬಸವನಹಳ್ಳಿಯಲ್ಲಿ ಮಂಗಳವಾರ ವೀರಗಾರರ ಎಳ್ಳು ಹೊಲದ ಈರಣ್ಣ ಧಾರ್ಮಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈರಣ್ಣ ಗುಡ್ಡೆ ದೇವರ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕ್ಷೇತ್ರಕ್ಕೆ ಒಂದೆರಡು ಎಕರೆ ಜಾಗ ಅಗತ್ಯವಿದ್ದು, ಜಮೀನು ಮಂಜೂರು ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಈ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ₹25 ಲಕ್ಷ ನೆರವು ಕೊಡಲಾಗುವುದು. ಪಕ್ಕದ ರಸ್ತೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೀಪಾವಳಿಗಿಂತ ಎರಡು ದಿನ ಮುಂಚೆ ಇಲ್ಲಿಗೆ ಬಂದು ಗದ್ದುಗೆಗೆ ನಮನ ಸಲ್ಲಿಸಿ ಹೋಗುವುದು ವಾಡಿಕೆಯಾಗಿದೆ. ಕಾಡುಗೊಲ್ಲ ಸಮುದಾಯದಿಂದ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲಿನ ಐದಾರು ತಾಲ್ಲೂಕುಗಳ ಭಕ್ತರು ಈ ಕ್ಷೇತ್ರದ ದೈವಕ್ಕೆ ನಡೆದುಕೊಳ್ಳುತ್ತಾರೆ ಎಂದರು.
ಮುಖಂಡರಾದ ಶಿವರಾಜ್, ಶಿವಕುಮಾರ್, ಹನುಮಂತರಾಜು, ಶೇಷಾಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.