ಶಿರಾ: ಟಿ.ಬಿ.ಜಯಚಂದ್ರ ಅವರು ಕ್ಷೇತ್ರದಲ್ಲಿ ₹2,500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ಉಗನೇಕಟ್ಟೆ ಗೇಟ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರವಾಗಿ ಬುಧವಾರ ಮತಯಾಚಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜಯಚಂದ್ರ ಅವರನ್ನು ಆಯ್ಕೆ ಮಾಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ಗೆ ಶಕ್ತಿ ನೀಡಿದಂತಾಗುವುದು ಎಂದರು.
ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ, ರಾಜಕೀಯ ಹಿನ್ನಲೆ ಹೊಂದಿರುವ ಕುಟುಂಬದಿಂದ ಬಂದಿರುವ ಎರಡು ಪಕ್ಷಗಳ ಅಭ್ಯರ್ಥಿಗಳು ಶಿರಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂದು ಮೊದಲು ಹೇಳಿ ನಂತರ ಟೀಕೆ ಮಾಡಲಿ. ಕ್ಷೇತ್ರದ ಜನ ಪ್ರಬುದ್ಧರಾಗಿದ್ದಾರೆ. ಚುನಾವಣೆಯಲ್ಲಿ ಬೆಂಬಲ ನೀಡಲಿದ್ದಾರೆ ಎಂದರು.
ಉಗನೇಕಟ್ಟೆ ಗೇಟ್, ಸಿದ್ದನಹಳ್ಳಿ, ಪಟ್ಟನಾಯಕನಹಳ್ಳಿ ಕ್ರಾಸ್, ನಾದೂರು, ಪಟ್ಟನಾಯಕನಹಳ್ಳಿ, ಹೊಸಹಳ್ಳಿ, ಯಾದಲಡಕು, ಕ್ಯಾದಿಗುಂಟೆ ಬಸವನಹಳ್ಳಿ ಗೇಟ್, ಕೊಟ್ಟಿ, ಹುಲಿಕುಂಟೆ, ತಡಕಲೂರು, ಬೆಜ್ಜಿಹಳ್ಳಿ, ಚಿರತಹಳ್ಳಿ, ಲಕ್ಕನಹಳ್ಳಿ, ದೊಡ್ಡಬಾಣಗೆರೆ, ಬರಗೂರು, ಹಂದಿಕುಂಟೆ, ಗೋಣಿಹಳ್ಳಿ, ಕರೇಕ್ಯಾತನಹಳ್ಳಿ, ಮದಲೂರು ಮತ್ತು ಕೊಟ್ಟ ಗ್ರಾಮಗಳಲ್ಲಿ ಮತಯಾಚಿಸಿದರು.
ಕೆಪಿಸಿಸಿ ವಕ್ತಾರ ಬಿ.ಎನ್.ಚಂದ್ರಪ್ಪ, ಸಂತೋಷ್ ಲಾಡ್, ಆರ್.ರಾಜೇಂದ್ರ, ಸತೀಶ್ ಸಾಸಲು, ಕಲ್ಕೆರೆ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಎಚ್.ಗುರುಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.