ADVERTISEMENT

ಜಕ್ಕನಹಳ್ಳಿ ಲಿಂಗರಾಜು ನಿವಾಸದ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 7:01 IST
Last Updated 12 ಜನವರಿ 2018, 7:01 IST
ಜಕ್ಕನಹಳ್ಳಿ ಲಿಂಗರಾಜು ನಿವಾಸ
ಜಕ್ಕನಹಳ್ಳಿ ಲಿಂಗರಾಜು ನಿವಾಸ   

ತಿಪಟೂರು: ತಾಲ್ಲೂಕು ಜೆಡಿಎಸ್ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ, ಗಣಿ ಉದ್ಯಮಿ ಜಕ್ಕನಹಳ್ಳಿ ಲಿಂಗರಾಜು ಅವರ ನಿವಾಸದ ಮೇಲೆ ಗುರುವಾರ ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೆಲ ದಾಖಲೆ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳ ತಂಡ ನಗರದ ಶಂಕರಪ್ಪ ಲೇಔಟ್‍ನಲ್ಲಿರುವ ಲಿಂಗರಾಜು ನಿವಾಸಕ್ಕೆ ತೆರಳಿ ತೀವ್ರ ಶೋಧ ನಡೆಸಿತು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಅವರ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು.

ನಂತರ ಕೆಲ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಲಿಂಗರಾಜು ಅವರನ್ನು ಹೆಚ್ಚಿನ ವಿಚಾರಣೆಗಾಗಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಕರೆದೊಯ್ದರು. ಯಾವ ಉದ್ದೇಶಕ್ಕಾಗಿ ದಾಳಿ ನಡೆದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು. ಲಿಂಗರಾಜು ಅವರು 2013ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹಾಲಿ ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. `ಒಲವೇ ವಿಸ್ಮಯ’ ಎಂಬ ಚಲನಚಿತ್ರ ನಿರ್ಮಿಸಿದ್ದರು.

ADVERTISEMENT

`ಆದಾಯ ಇಲಾಖೆಯ ಅಧಿಕಾರಿಗಳು ನನ್ನ ನಿವಾಸ ಮೇಲೆ ಏಕೆ ದಿಢೀರ್ ದಾಳಿ ನಡೆಸಿದ್ದಾರೆ ಎಂದು ನನಗೆ ತಿಳಿದು ಬಂದಿಲ್ಲ. ನನ್ನ ವ್ಯವಹಾರವೆಲ್ಲ ಪಾರದರ್ಶಕವಾಗಿದ್ದರೂ ದಾಳಿಯ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ನನ್ನ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದಾಖಲೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರಿಗಳು ಕೇಳಿರುವ ಎಲ್ಲ ದಾಖಲೆಗಳನ್ನು ನೀಡಲು ಸಿದ್ಧನಿದ್ದೇನೆ’ ಎಂದು ಜಕ್ಕನಹಳ್ಳಿ ಲಿಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.