ಕೊಡಿಗೇನಹಳ್ಳಿ: ದೇಶದ ಮೂರು ಆಧಾರಸ್ತಂಭಗಳಾದ ಸೈನಿಕ, ರೈತ ಹಾಗೂ ನ್ಯಾಯಾಂಗ ಎಲ್ಲಿವರೆಗೂ ಕಾರ್ಯ ನಿರ್ವಹಿಸುತ್ತದೆಯೊ ಅಲ್ಲಿವರೆಗೂ ದೇಶದಲ್ಲಿ ಅಭದ್ರತೆ ಕಾಡುವುದಿಲ್ಲ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ಮಧುಗಿರಿಯ ತಾಲ್ಲೂಕು ನ್ಯಾಯಾಲಯದ ವಕೀಲರ ಸಂಘದ ಕೊಠಡಿಯಲ್ಲಿ ಭಾನುವಾರ ನಡೆದ ‘ನ್ಯಾಯ ವಿತರಣೆಯಲ್ಲಿ ವಕೀಲರ ಪಾತ್ರ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯಹೋರಾಟದಲ್ಲಿ ಅನೇಕ ಮಹನೀಯರ ಜೊತೆಗೆ ವಕೀಲರು ತ್ಯಾಗ-ಬಲಿದಾನ ಮಾಡಿದ್ದರು. ಮಹಾತ್ಮ
ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಜವಹರ್ ಲಾಲ್ ನೆಹರೂ ಅಲ್ಲದೆ ಬಹುತೇಕ ಹೋರಾಟಗಾರರು ವಕೀಲರೆ ಆಗಿದ್ದರು. ವಕೀಲರು ಅಭಿಮನ್ಯುವಿನಂತೆ ನ್ಯಾಯಸ್ಥಾನದಲ್ಲಿ ನ್ಯಾಯದ ಸೈನಿಕನಂತೆ. ನ್ಯಾಯ ವಿಚಾರಣೆಯಲ್ಲಿ ತೊಡಗಿಸಿಕೊಂಡು ನಮಗೆ ಅನ್ನದಾತರಾಗಿರುವ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ನಟರಾಜುರಂಗಸ್ವಾಮಿ ಮಾತನಾಡಿ, ವೈದ್ಯರು ಜನರ ಜೀವ ಉಳಿಸಬಹುದು. ಆದರೆ ವಕೀಲರಿಗೆ ಜನರ ಜೀವನ ಕಟ್ಟಿ ಕೊಡುವ ಶಕ್ತಿಯಿದೆ. ವಕೀಲರು ಸಾಮಾಜಿಕ ಹಕ್ಕು ಕೊಡಿಸಿದಾಗ ಮಾತ್ರ ವೃತ್ತಿಯಲ್ಲಿ ಸಾರ್ಥಕತೆ ದೊರೆಯುತ್ತದೆ ಎಂದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ ಮಾತನಾಡಿ, ಮಧುಗಿರಿಯಲ್ಲಿ ನ್ಯಾಯಾಲಯ ಸಂಕೀರ್ಣದ ಭವ್ಯ ಕಟ್ಟಡ ನಿರ್ಮಾಣವಾದರೂ ವಕೀಲರ ಸಂಘಕ್ಕೆ ಪ್ರತ್ಯೇಕ ಕಟ್ಟಡವಿಲ್ಲದ ಬಗ್ಗೆ ಮತ್ತು ಕಳೆದ ನೂರಾರು ವರ್ಷಗಳಿಂದ ಸಂಘಕ್ಕೆ ಸ್ವಂತ ಕಟ್ಟಡವಿಲ್ಲದೇ ಪಡುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ಎನ್. ಮಧುಸೂದನ್, ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ
ಮಾತನಾಡಿದರು.
ನ್ಯಾಯಾಧೀಶರಾದ ತಾರಕೇಶ್ವರ ಗೌಡ, ಪಾಟೀಲ, ಅಬ್ದುಲ್ ರೆಹಮಾನ್ ಮುಲ್ಲಾ, ಕಾವ್ಯಶ್ರೀ, ನೋಟರಿಗಳಾದ ಎಚ್.ಕೆ.ವಿ. ರೆಡ್ಡಿ, ಪಾಂಡುರಂಗಯ್ಯ, ನಾಗಭೂಷಣ್, ಅನ್ನಪೂರ್ಣದೇವಿ, ಹಿರಿಯ ವಕೀಲರುಗಳಾದ ಬಿ.ಆರ್. ರಾಮಕೃಷ್ಣಯ್ಯ, ಹಾಲಪ್ಪ, ಬಿ.ಎಚ್. ಪಂಚಾಕ್ಷರಯ್ಯ, ದತ್ತಾತ್ರೇಯ, ಎಂ.ವಿ. ದಯಾನಂದಸಾಗರ್, ರಘನಾಥರೆಡ್ಡಿ, ಎಚ್.ಟಿ. ತಿಮ್ಮರಾಜು, ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ, ಡಿ.ವೈ.ಎಸ್.ಪಿ. ಕೆ.ಜಿ. ರಾಮಕೃಷ್ಣ, ತಹಶೀಲ್ದಾರ್ ಡಾ. ಜಿ. ವಿಶ್ವನಾಥ್, ಪುರಸಭಾ ಅಧ್ಯಕ್ಷ ತಿಮ್ಮರಾಜು, ಮುಖ್ಯಾಧಿಕಾರಿ ಅಮರ್ ನಾರಾಯಣ್, ವಲಯಾರಣ್ಯಾಧಿಕಾರಿ ವಾಸುದೇವಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.