ತುಮಕೂರು: ಕೊಳಚೆ ಪ್ರದೇಶದಲ್ಲಿ ನೀಡುತ್ತಿರುವ ಕೋವಿಡ್ ಲಸಿಕೆ ಮೇಲ್ವರ್ಗ, ಮಧ್ಯಮ ವರ್ಗದ ಜನರ ಪಾಲಾಗುತ್ತಿದೆ ಎಂದು ಸ್ಲಂ ಜನಾಂದೋಲನ– ಕರ್ನಾಟಕಸಂಘಟನೆ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದ್ದಾರೆ.
ಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ಚಿಂದಿ ಹಾಯುವ ಕೋವಿಡ್ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ಅಭಿಯಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿ, ಆರೋಗ್ಯ ಇಲಾಖೆ ಯಾವುದೇ ಮಾಹಿತಿ ಸಂಗ್ರಹಿಸದೆ ನಿರ್ಲಕ್ಷ್ಯ ವಹಿಸಿದ್ದು, ಕೊಳಚೆ ನಿವಾಸಿಗಳಿಗೆ ಲಸಿಕೆ ಸಿಗದಾಗಿದೆ. ಕೊಳೆಗೇರಿಗಳ ಜನರು ಶೇ 1ರಷ್ಟೂ ಲಸಿಕೆ ಪಡೆದಿಲ್ಲ ಎಂದು ಹೇಳಿದರು.
45 ವರ್ಷ ಮೇಲ್ಪಟ್ಟವರಿಗೂ ಕೊಳೆಗೇರಿಗಳಲ್ಲಿ ಈವರೆಗೂ ಲಸಿಕೆ ದೊರೆತಿಲ್ಲ. ಎಲ್ಲಿ ಒತ್ತಾಯವಿರುತ್ತದೊ ಅಲ್ಲಿ ಮಾತ್ರ ಸಾಂಕೇತಿಕವಾಗಿ ಲಸಿಕೆ ಹಾಕುತ್ತಿರುವುದು ತಾರತಮ್ಯ ಮಾಡಿದಂತಾಗುತ್ತದೆ. ಜನರಲ್ಲಿರುವ ಅನುಮಾನ, ಭಯ ಹೋಗಲಾಡಿಸಿ ವ್ಯಾಪಕವಾಗಿ ಲಸಿಕೆ ಅಭಿಯಾನ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್, ಮಾರಿಯಮ್ಮ ಯುವ ಸಂಘದ ಅಧ್ಯಕ್ಷ ಕಣ್ಣನ್, ಹಸಿರು ದಳ ಸಂಸ್ಥೆಯ ಮೋಹನ್ ವಿಶ್ವನಾಥ್, ಮಾರಿಯಮ್ಮ ಸಂಘದ ಮಾದವ, ಚಕ್ರಪಾಣಿ, ಮಾರಿ, ಮಧು, ಕಲಾ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.