ತುಮಕೂರು: ರಾಜ್ಯದ ಕೆಲವು ಜಿಲ್ಲೆಯಲ್ಲಿ ಇಂದಿಗೂ ಕೆಎಸ್ಆರ್ಟಿಸಿ ಬಸ್ಗಳು ಕೋವಿಡ್ ಪೂರ್ವದಲ್ಲಿ ಇದ್ದ ಯಥಾಸ್ಥಿತಿಯಂತೆ ಕಾರ್ಯಾಚರಣೆ ನಡೆಸುತ್ತಿಲ್ಲ. ಆದರೆ ತುಮಕೂರು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಸಾರಿಗೆ ವ್ಯವಸ್ಥೆ ವಾರದಿಂದ ವಾರಕ್ಕೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.
ಸದ್ಯ ಶೇ 87ರಷ್ಟು ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಸೋಮವಾರದ ವೇಳೆಗೆ ಶೇ 90ರಷ್ಟು ಬಸ್ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಜಿಲ್ಲಾ ಕೆಎಸ್ಆರ್ಟಿಸಿ ಮೂಲಗಳು ತಿಳಿಸುತ್ತವೆ.
‘ಜಿಲ್ಲೆಯಲ್ಲಿ ಒಟ್ಟು 621 ಬಸ್ಗಳು ನಿತ್ಯ ಸಂಚರಿಸುತ್ತವೆ. ಸದ್ಯ 542 ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಹಂತ ಹಂತವಾಗಿ ಮತ್ತಷ್ಟು ಬಸ್ಗಳು ಕಾರ್ಯಾಚರಣೆ ನಡೆಸುತ್ತವೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ತಿಳಿಸಿದರು.
‘ಸಾರ್ವಜನಿಕರು ಬೇಡಿಕೆಗೆ ಅನುಸಾರ ಬಸ್ಗಳನ್ನು ಓಡಿಸಲಾಗುತ್ತಿದೆ. ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ’ಎಂದರು.
ಲಾಕ್ಡೌನ್ ಅವಧಿಯಲ್ಲಿ ಜಿಲ್ಲೆಯ ಕೆಎಸ್ಆರ್ಟಿಸಿಗೆ ಬರೋಬ್ಬರಿ ₹ 36 ಕೋಟಿ ನಷ್ಟವಾಗಿತ್ತು. ಲಾಕ್ಡೌನ್ ತೆರವಾದ ನಂತರ ಹಂತ ಹಂತವಾಗಿ ಸಂಸ್ಥೆಯ ಬಸ್ಗಳು ರಸ್ತೆಗೆ ಇಳಿದಿವೆ.
ಶೇ 50 ರಷ್ಟು ಬಸ್ಗಳ ಕಾರ್ಯಾಚರಣೆ: ಖಾಸಗಿ ಬಸ್ಗಳು ಶೇ 50ರಷ್ಟು ಮಾತ್ರ ರಸ್ತೆಗಿಳಿದಿವೆ. ಕೆಎಸ್ಆರ್ಟಿಸಿ ಬಸ್ಗಳು ಲಾಕ್ಡೌನ್ ತೆರವಾದ ನಂತರ ಶೇ 50ರಷ್ಟು ಸೀಟುಗಳನ್ನು ಭರ್ತಿ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಒಂದು ಮಾರ್ಗಕ್ಕೆ ಎರಡು ಬಸ್ಗಳನ್ನು ಬಿಟ್ಟರು. ಆದರೆ ಆ ಬಸ್ಗಳನ್ನು ಇಂದಿಗೂ ನಿಲ್ಲಿಸಿಲ್ಲ. ಇದರಿಂದ ಸಂಸ್ಥೆಗೂ ನಷ್ಟ. ನಮಗೂ ಪೆಟ್ಟು ಎಂದು ಖಾಸಗಿ ಬಸ್ಗಳ ಮಾಲೀಕರಸಂಘದ ಅಧ್ಯಕ್ಷ ಶಂಕರನಾರಾಯಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.