ADVERTISEMENT

ಪಾದಯಾತ್ರೆಗೆ ಅನುಮತಿ ನಿರಾಕರಣೆ: ಅಂಗನವಾಡಿ ಕಾರ್ಯಕರ್ತೆಯರು–ಪೊಲೀಸರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 7:01 IST
Last Updated 10 ಡಿಸೆಂಬರ್ 2019, 7:01 IST
ತುಮಕೂರಿನಲ್ಲಿ ಪಾದಯಾತ್ರೆಗೆ ಬಂದಿರುವ ಅಂಗನವಾಡಿ ಕಾರ್ಯಕರ್ತೆ
ತುಮಕೂರಿನಲ್ಲಿ ಪಾದಯಾತ್ರೆಗೆ ಬಂದಿರುವ ಅಂಗನವಾಡಿ ಕಾರ್ಯಕರ್ತೆ   

ತುಮಕೂರು: ಕೇಂದ್ರ ಸರ್ಕಾರವು ಶಿಶು ಅಭಿವೃದ್ಧಿ ಯೋಜನೆ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ.

ಇದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಮಂಗಳವಾರ ಮಧ್ಯಾಹ್ನ ನಗರದ ಗಾಜಿನ ಮನೆಯಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪಾದಯಾತ್ರೆಗೆ ಚಾಲನೆ ನೀಡಬೇಕಿತ್ತು.

ಆದರೆ ಸೋಮವಾರ ರಾತ್ರಿ ಪೊಲೀಸರು ಕರೆ ಮಾಡಿ ಪಾದಯಾತ್ರೆ ಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ನಾವು ಈ ಹಿಂದೆ ಬೆಂಗಳೂರು ನಗರ ಕಮೀಷನರ್ ಅವರನ್ನು ಭೇಟಿ ಮಾಡಿ ಪಾದಯಾತ್ರೆಗೆ ಅನುಮತಿ ಕೋರಿದ್ದೆವು‌. ಅವರು ಮೌಖಿಕವಾಗಿ ಒಪ್ಪಿದ್ದರು. ಆದರೆ ಈಗ ಏಕಾಏಕಿ ಅನುಮತಿ ನಿರಾಕರಿಸಲಾಗಿದೆ ಎಂದು ಅಂಗನವಾಡಿ ಫೆಡರೇಷನ್ ಮುಖಂಡರು ದೂರಿದರು.

ADVERTISEMENT

ಈ ನಡುವೆಯೇ ಫೆಡರೇಷನ್ ಮುಖಂಡರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅಲ್ಲಿಗೆ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಉಮೇಶ್ ಬಂದು ಮುಖಂಡರ ಜೊತೆ ಮಾತುಕತೆ ನಡೆಸಿದರು. ಜಿಲ್ಲೆಯ ಇತರ ಭಾಗಗಳಿಂದಲೂ ಕಾರ್ಯಕರ್ತೆಯರು ನಗರದ ಟೌನ್ ಹಾಲ್ ಬಳಿ ಬಂದು ಸೇರುತ್ತಿದ್ದಾರೆ.

ಪಾದಯಾತ್ರೆಯಲ್ಲಿ ತೆರಳುವ ಕಾರ್ಯಕರ್ತೆಯರುನ.10ಕ್ಕೆ ತುಮಕೂರು ತಾಲ್ಲೂಕಿನ ನಂದಿಹಳ್ಳಿ, 11ಕ್ಕೆ ನೆಲಮಂಗಲದ ಜಾಸ್ ಟೋಲ್ ಬಳಿಯ ಮಾಜಿ ಸಚಿವ ಚನ್ನಿಗಪ್ಪ ಅವರ ಕಾಲೇಜು ಮೈದಾನ ಮತ್ತು 12ಕ್ಕೆ ಮಾದಾವರದಲ್ಲಿ ವಾಸ್ತವ್ಯ ಹೂಡಬೇಕಿತ್ತು. 13ರರಾತ್ರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ತಲುಪಬೇಕಿತ್ತು.

ಪೊಲೀಸರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿನಿಧಿಗಳ ಮಾತುಕತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.