ತುರುವೇಕೆರೆ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮವಹಿಸಿ ದುಡಿಯುವ ನೌಕರರಿಗೆ ನಿರ್ದಿಷ್ಟ ಸಮಯದಲ್ಲಿ ಸಂಬಳ ನೀಡದ ರಾಜ್ಯ ಸರ್ಕಾರದ ಧೋರಣೆ ಖಂಡನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೌಕರರ ಸಂಘ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನೆ ಮತ್ತು ತರಬೇತಿ ಕೇಂದ್ರದಿಂದ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತಿದೆ. ಆದರೆ ಲಕ್ಷಾಂತರ ಸಂಖ್ಯೆಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ನಿರ್ದಿಷ್ಟ ವೇತನ ನೀಡಲು ಮೀನಾಮೇಷ ಎಣಿಸುತ್ತದೆ ಎಂದರು.
ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ತ್ರೀರೋಗ, ಪ್ರಸೂತಿ ತಜ್ಞೆ ಆಶಾಚೌದ್ರಿ, ಸಮಾಜ ಸೇವಕಿ ಮಧುಶ್ರೀ, ಪೋಲೀಸ್ ಇಲಾಖೆ ಶಮೀನಾ, ನಿವೃತ್ತ ಮೇಲ್ವಿಚಾರಕಿಯರಾದ ಇಂದಿರಾ, ರಂಗಮಣಿ, ಲಕ್ಷ್ಮಿ, ಹಾವು ಕಡಿತಕ್ಕೆ ಔಷದಿ ನೀಡುವ ರೆಹನಾ ಬೇಗಂ, ಸಮಾಜ ಸೇವಕಿ ಲತಾ, ಹರಿಕಥೆ ವಾಚಕ ಗೌರಮ್ಮ ಅವರನ್ನು ಸತ್ಕರಿಸಲಾಯಿತು.
ಅಂಗನವಾಡಿ ನೌಕರರು ಪ್ರದರ್ಶಿಸಿದ ಕಿರುನಾಟಕ, ಸೋಮನಕುಣಿತ, ವೀರಗಾಸೆ ಸೇರಿ ಹಲವು ಜನಪದ ನೃತ್ಯ, ಕಲೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನನಟೇಶ್, ಉಪಾಧ್ಯಕ್ಷೆ ಕೆ.ಭಾಗ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು, ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಜಯಮ್ಮ ಹಾಗೂ ವೆಂಕಟಾಪುರ ಯೋಗೀಶ್, ಇಲಾಖಾ ಅಧಿಕಾರಿಗಳು, ಅಂಗನವಾಡಿ ನೌಕರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.