ADVERTISEMENT

ಮಕ್ಕಳ ಆಹಾರ ಸಾಗಣೆ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಅಂಗನವಾಡಿ ಸಹಾಯಕಿ ಪತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:09 IST
Last Updated 7 ಸೆಪ್ಟೆಂಬರ್ 2021, 5:09 IST
ಮಕ್ಕಳ ಪೌಷ್ಟಿಕ ಆಹಾರವನ್ನು ಕದ್ದು ಸಾಗಿಸುತ್ತಿದ್ದ ಅಂಗನವಾಡಿ ಸಹಾಯಕಿಯ ಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವುದು
ಮಕ್ಕಳ ಪೌಷ್ಟಿಕ ಆಹಾರವನ್ನು ಕದ್ದು ಸಾಗಿಸುತ್ತಿದ್ದ ಅಂಗನವಾಡಿ ಸಹಾಯಕಿಯ ಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವುದು   

ತಿಪಟೂರು: ಅಂಗನವಾಡಿಯ ಪೌಷ್ಟಿಕ ಆಹಾರವನ್ನು ಬೇರೆಡೆಗೆ ಸಾಗಿಸುವ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯೊಬ್ಬರ ಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.

ತಾಲ್ಲೂಕಿನ ದಸರೀಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ಹುಚ್ಚನಹಳ್ಳಿಯ ಅಂಗನವಾಡಿ ಸಹಾಯಕಿ ಚೈತ್ರಾ ವೈ. ಅವರ ಪತಿ ಅಶೋಕ ಎಂಬುವರು ಸಾಗಿಸುತ್ತಿದ್ದಾಗ ಸಾರ್ವಜನಿಕರು ಹಿಡಿದುಕೊಂಡಿದ್ದಾರೆ.

ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸಬೇಕಾದ ಕಡಲೆಬೀಜ, ಹೆಸರುಕಾಳು, ಕಡಲೆಕಾಳು, ಹಾಲಿನ ಪ್ಯಾಕೆಟ್ ಮುಂತಾದ ಸಾಮಗ್ರಿಗಳನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಈ ವೇಳೆ ಗ್ರಾಮಸ್ಥರ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ. ಆಗಆಹಾರ ಪದಾರ್ಥವನ್ನು ಸಾಸಲಹಳ್ಳಿಗೆ ಕಳುಹಿಸುತಿದ್ದೇವೆ ಎಂದು ಹೇಳಿದ್ದಾರೆ.

ADVERTISEMENT

ಆದರೆ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವುದಾದರೆ ಸ್ವತಃ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿಯೇ ಮನೆಗೆ ತಲುಪಿಸಬೇಕು. ಅದನ್ನು ಬಿಟ್ಟು ಯಾವುದೋ ಬ್ಯಾಗಿಗೆ ತುಂಬಿ ಸಹಾಯಕಿಯ ಪತಿಯಿಂದ ತಲುಪಿಸುವ ಅಗತ್ಯವೇನಿದೆ ಎಂದು ನಾಗರಿಕರು ಪ್ರಶ್ನಿಸಿದರು. ಸ್ಥಳಕ್ಕೆ ಸಿಡಿಪಿಒ ಬರಲಿ ಎಂದು ಗ್ರಾಮಸ್ಥರು ಆಗ್ರಹಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಬಹಳ ದಿನಗಳಿಂದಲೂ ಪೌಷ್ಟಿಕ ಆಹಾರ ಕದ್ದು ಸಾಗಿಸುತ್ತಿದ್ದರು. ಮಕ್ಕಳ ಮನೆಯವರು ಕೇಳಿದರೆ ಇನ್ನು ಬಂದಿಲ್ಲ. ಬಂದಾಗ ಕೊಡುತ್ತೇವೆಂದು ಹೇಳುತ್ತಾರೆ. ಸಾಮಗ್ರಿಗಳನ್ನು ಕದ್ದು ಸಾಗಿಸುವುದನ್ನು ಹಿಡಿಯಲೆಂದು ಕಾಯ್ದಿದ್ದೆವು. ಈ ದಿನ ನಮ್ಮ ಮುಂದೆಯೇ ತೆಗೆದುಕೊಂಡು ಹೋಗುವುದನ್ನು ನೋಡಿ ಹಿಡಿದಿದ್ದೇವೆ’ ಎಂದು ಮೋಹನ್ ಕುಮಾರ್, ದೇವರಾಜು ತಿಳಿಸಿದರು.

‘ಅಕ್ರಮವಾಗಿ ಪೌಷ್ಟಿಕ ಆಹಾರ ಸಾಗಣೆ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ಮೇಲ್ವಿಚಾರಕಿಯನ್ನು ಕಳುಹಿಸಿ ಪರಿಶೀಲಿಸಲಾಗಿದೆ. ಕಾರ್ಯಕರ್ತೆ, ಸಹಾಯಕಿಗೆ ನೋಟಿಸ್ ನೀಡಲಾಗಿದೆ’ ಎಂದುಸಿಡಿಪಿಒ ಓಂಕಾರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.