ADVERTISEMENT

ತುಮಕೂರು | ಅಡಿಕೆ ಇಳುವರಿ ಕುಸಿತ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:17 IST
Last Updated 21 ಆಗಸ್ಟ್ 2025, 7:17 IST
ಅಡಿಕೆ ತೋಟ
ಅಡಿಕೆ ತೋಟ   

ತೋವಿನಕೆರೆ (ತುಮಕೂರು): ರೈತರ ಜೇಬು ತುಂಬಿಸುತ್ತಾ ಬಂದಿರುವ ಅಡಿಕೆ ಬೆಳೆ ಈ ಬಾರಿ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸಿದೆ. ಇಳುವರಿ ಕುಸಿತದ ಮುನ್ಸೂಚನೆ ಸಿಕ್ಕಿರುವುದು ರೈತರು, ಚೇಣಿದಾರರನ್ನು ಸಂಕಷ್ಟಕ್ಕೆ ದೂಡಿದೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಯುವ ಪ್ರದೇಶ ವಿಸ್ತರಿಸುತ್ತಲೇ ಸಾಗಿದ್ದು, ಪ್ರಸ್ತುತ 87 ಸಾವಿರ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಧಾರಣೆ ಇದೇ ರೀತಿ ಮುಂದುವರಿದರೆ ಸಿಕ್ಕಸಿಕ್ಕಲ್ಲಿ ಅಡಿಕೆ ಸಸಿ ನೆಡಲು ರೈತರು ಮುಂದಾಗುತ್ತಾರೆ. ಬೆಲೆ ಸ್ಥಿರತೆಯನ್ನು ಗಮನಿಸಿದ ರೈತರು ಬೆಳೆ ಬೆಳೆಯುವ ಪ್ರದೇಶ ಹೆಚ್ಚಿಸುತ್ತಲೇ ಸಾಗಿದ್ದಾರೆ.

ಈವರೆಗೆ ಇಳುವರಿಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಇಳುವರಿ ಕಡಿಮೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೊಂಬಾಳೆ ಮೂಡಿ, ಕಾಯಿ ಕಟ್ಟಿ ಹಸಿರು ಬಣ್ಣಕ್ಕೆ ತಿರುಗಿದ್ದರೆ ಇನ್ನು ಬೆಳೆ ಕೈಸೇರಿದಂತೆ ಎಂದೇ ರೈತರು ಭಾವಿಸಿದ್ದರು. ಈ ವರ್ಷ ಪೀಚು, ಕಾಯಿ ಗೊನೆಯಲ್ಲಿ ನಿಲ್ಲುತ್ತಿಲ್ಲ. ಸಾಕಷ್ಟು ಕಡೆಗಳಲ್ಲಿ ಕಾಯಿ ಉದುರುತ್ತಿರುವುದು ಕಂಡು ಬರುತ್ತಿದೆ.

ADVERTISEMENT

ಗೊನೆಯಲ್ಲಿ ಪೀಚು ನಿಲ್ಲದೆ, ಉದುರುವುದು ಹೆಚ್ಚುತ್ತಿರುವುದನ್ನು ಗಮನಿಸಿದ ವ್ಯಾಪಾರಿಗಳು ಅಡಿಕೆ ತೋಟವನ್ನು ಚೇಣಿಗೆ (ಗುತ್ತಿಗೆ) ಪಡೆದುಕೊಳ್ಳಲು ಮುಗಿ ಬೀಳುತ್ತಿಲ್ಲ. ಈಗ ಬಿಟ್ಟಿರುವ ಹೊಂಬಾಳೆ ನೋಡಿ ಚೇಣಿಗೆ ತೆಗೆದುಕೊಂಡರೆ ಮುಂದೆ ಇಳುವರಿ ಕುಸಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಕಳೆದ ಕೆಲ ವರ್ಷಗಳಿಂದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕ್ವಿಂಟಲ್ ₹55 ಸಾವಿರದಿಂದ 60 ಸಾವಿರಕ್ಕೆ ಮಾರಾಟವಾಗುತ್ತಿದೆ. ಆದರೆ ಈ ವರ್ಷ ಬೆಲೆ ಇಳಿಕೆಯಾಗಬಹುದು ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾದರೆ ಎಂಬ ಕಾರಣ ಮುಂದಿಟ್ಟುಕೊಂಡು ಸಣ್ಣ–ಪುಟ್ಟ ತೋಟಗಳ ಚೇಣಿಗೆ ಮುಂದಾಗುತ್ತಿಲ್ಲ.

ನಾಲ್ಕೈದು ಎಕರೆಗಿಂತ ದೊಡ್ಡದಾದ ತೋಟಗಳನ್ನು ಚೇಣಿಗೆ ಪಡೆದುಕೊಳ್ಳುತ್ತಿದ್ದಾರೆ. ಕೆಲವು ಮರಗಳಲ್ಲಿ ಇಳುವರಿ ಕಡಿಮೆಯಾದರೂ, ಮತ್ತೆ ಕೆಲವು ಕೈ ಹಿಡಿಯುತ್ತವೆ ಎಂಬ ಕಾರಣಕ್ಕೆ ದೊಡ್ಡ ಮಟ್ಟದ ತೋಟಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣದ ತೋಟಗಳನ್ನು ಚೇಣಿ ಮಾಡಲು ಆಸಕ್ತಿ ತೋರುತ್ತಿಲ್ಲ. ಕಾರ್ಮಿಕರ ಕೊರತೆಯಿಂದಾಗಿ ದೊಡ್ಡ ತೋಟಗಳ ಕಡೆ ವರ್ತಕರು ಆಸಕ್ತಿ ತೋರಿಸುತ್ತಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.

ಗುತ್ತಿಗೆದಾರರು ತಮ್ಮದೇ ಆದ ಲೆಕ್ಕಾಚಾರದ ಮೇಲೆ ಒಂದು ಕ್ವಿಂಟಲ್ ಇಳುವರಿ ಬರುವ ತೋಟವನ್ನು ₹35 ಸಾವಿರದಿಂದ ₹40 ಸಾವಿರದ ವರೆಗೂ ಚೇಣಿಗೆ ಪಡೆದುಕೊಳ್ಳುತ್ತಿದ್ದಾರೆ. ಉತ್ತಮ ಇಳುವರಿ ಇರುವ ತೋಟಗಳಿಗೆ ಒಳ್ಳೆ ಬೆಲೆ ನೀಡಿ ಗುತ್ತಿಗೆ ನಿಗದಿಪಡಿಸಿಕೊಂಡಿದ್ದಾರೆ. ತೋವಿನಕೆರೆ ಸಮೀಪದ ಜೋನಿಗರಹಳ್ಳಿ ರಂಗನಾಥ್ ತಮ್ಮ ತೋಟವನ್ನು (345 ಮರ) ₹5.10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ನಿರಂತರವಾಗಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಲೇ ಬಂದಿದ್ದಾರೆ.

ಇಳುವರಿ ಇರುವ ತೋಟಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇಳುವರಿ ಇಲ್ಲದ ತೋಟಗಳನ್ನು ಕಡಿಮೆ ಬೆಲೆಗೆ ಚೇಣಿಗೆ ಕೇಳುತ್ತಿದ್ದಾರೆ ಎಂದು ರೈತ ಸಣ್ಣಮುದ್ದಪ್ಪ ಹೇಳಿದರು.

ಆಗಸ್ಟ್ ಅಂತ್ಯದ ವೇಳೆಗೆ ಈ ವರ್ಷದ ಮೊದಲ ಕೊಯ್ಲು ಆರಂಭವಾಗಲಿದ್ದು, ಇಳುವರಿ ನೋಡಿಕೊಂಡು ಮತ್ತಷ್ಟು ತೋಟಗಳನ್ನು ಚೇಣಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಚೇಣಿದಾರರು ಹೇಳುತ್ತಾರೆ.

ಇಳುವರಿ ಕುಸಿತಕ್ಕೆ ಹಲವು ಕಾರಣ

ಈ ಬಾರಿ ಸ್ವಲ್ಪ ಮಟ್ಟಿಗೆ ಅಡಿಕೆ ಇಳುವರಿ ಕಡಿಮೆ ಆಗಬಹುದು. ಕಳೆದ ವರ್ಷ ತಾಪಮಾನದಲ್ಲಿ ಹೆಚ್ಚಳ ಈ ವರ್ಷ ಹೊಂಬಾಳೆ ಮೂಡಿ ಕಾಯಿ ಕಟ್ಟುವ ಸಮಯದಲ್ಲಿ ಮಳೆ ಕೊರತೆಯಿಂದಾಗಿ ಇಳುವರಿ ಮೇಲೆ ಪರಿಣಾಮ ಬೀರಿದೆ. ಸಕಾಲದಲ್ಲಿ ನೀರು ಗೊಬ್ಬರ ನೀಡದಿರುವುದು ಕಾರಣವಾಗಿದೆ. ಶಾರದಮ್ಮ ಉಪನಿರ್ದೇಶಕಿ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.