ತಿಪಟೂರು: ಮೀಸಲಾತಿಯು ಶೋಷಿತ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿ ಸಂವಿಧಾನ ನೀಡಿರುವ ಕೊಡುಗೆಯಾಗಿದ್ದು, ಕೂಡಲೇ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಜಾರಿಮಾಡಬೇಕು ಎಂದು ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ಎಂ.ಶಂಕರಪ್ಪ ಒತ್ತಾಯಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಮಾದಿಗ ದಂಡೋರ ಸಮಿತಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಹಾಗೂ ನೂತನ ಗ್ರಾಮಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೀಸಲಾತಿ ಶೋಷಿತ, ಅಲಕ್ಷಿತ ಸಮುದಾಯಗಳನ್ನ ಮುಖ್ಯವಾಹಿನಿಗೆ ತರಲು ಸಂವಿಧಾನ ನೀಡಿರುವ ಹಕ್ಕು.
ಆದರೆ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜಕೀಯ ಓಲೈಕೆ
ಗಾಗಿ ಮೀಸಲಾತಿ ನೀಡುತ್ತಿರುವುದು ನೋವಿನ ಸಂಗತಿ. ಅಂಬೇಡ್ಕರ್ ಆಶಯ ಈಡೇರಬೇಕಾದರೆ ಮೂಲ ಆಶಯಗಳಿಗೆ ದಕ್ಕೆಯಾಗದೇ ಒಳಮೀಸಲಾತಿ ಜಾರಿಯಾಗಬೇಕು. ಪರಿಶಿಷ್ಟರಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಒಳಮೀಸಲಾತಿ ಜಾರಿಮಾಡಿ ಎಂದು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಗಳು ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುತ್ತಿದೆ ಎಂದರು.
ರಾಜ್ಯದಾದ್ಯಂತ ಒಳಮೀಸಲಾತಿ ಪರವಾದ ಎಲ್ಲ ಮಾದಿಗ, ಹೊಲೆಯ ಸಂಘಟನೆಗಳನ್ನು ಒಗ್ಗೂಡಿಸುತ್ತಿದ್ದು, ನಮ್ಮ ಹಕ್ಕಿಗಾಗಿ ಉಗ್ರಹೋರಾಟದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರು ಜಾಗೃತರಾಗಿ ಸಂಘಟಿತ ಹೋರಾಟ ಮಾಡಬೇಕಿದ್ದು, ಪ್ರತಿಗ್ರಾಮಗಳಲ್ಲೂ ಒಳಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಒಳಮೀಸಲಾತಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆ ಅಣಿಯಾಗುತ್ತಿದ್ದು, ಬೆಂಗಳೂರಿನಲ್ಲಿ ಬೃಹತ್ ಹೋರಾಟದ ಮೂಲಕ ಸಂಘಟಿಸೋಣ ಎಂದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಳ್ಳಿ ರಾಜಪ್ಪ ಮಾತನಾಡಿ, ಮೀಸಲಾತಿಯ ಮೂಲ ಉದ್ದೇಶ ಅಪಾಯ
ದಲ್ಲಿದೆ. ಸಮಾಜದಲ್ಲಿ ನೋವನ್ನೇ ಕಾಣದ ಸಮುದಾಯಗಳು ಮೀಸಲಾತಿಯನ್ನು ಕಬಳಿಸುತ್ತಿವೆ. ಶೋಷಿತ ಸಮು
ದಾಯಗಳು ಜಾಗೃತರಾಗದ್ದಿದರೆ ಮೀಸಲಾತಿ ಕನ್ನಡಿಯೊಳಗಿನ ಗಂಟಿನಂತಾಗುತ್ತದೆ. ನಮ್ಮ ನ್ಯಾಯಯುತ ಹಕ್ಕನ್ನು ಪಡೆಯಲು ಹಿಂಜರಿಯುವ ಅವಶ್ಯಕತೆ ಇಲ್ಲ. ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಬೇಕು. ನಮ್ಮ ವಿಮೋಚನೆಗೆ ನಾವೇ ಶಿಲ್ಪಗಳಾಗಬೇಕು
ಎಂದರು.
ರಾಜ್ಯಪ್ರದಾನ ಕಾರ್ಯದರ್ಶಿ ಆರ್.ಪ್ರಕಾಶ್, ಖಜಾಂಚಿ ಮುನಿರಾಜು, ಮಡಿವಾಳ ನಾರಾಯಣಸ್ವಾಮಿ, ಈಚುನುರು ಮಹಾದೇವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.