ಶಿರಾ: ತಾಲ್ಲೂಕಿನ ಜಾನಕಲ್ಲು ಗ್ರಾಮದಲ್ಲಿ ಮಂಗಳವಾರ ಜೂಜಾಟದಲ್ಲಿ ತೊಡಗಿದ್ದವರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಾನ್ಸ್ಟೆಬಲ್ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಅಕ್ರಮವಾಗಿ ಗುಂಪು ಸೇರಿಕೊಂಡು ಪೊಲೀಸ್ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ ವಿರೂಪಾಕ್ಷಪ್ಪ, ಶರಣಪ್ಪ, ಚಂದ್ರಶೇಖರ್, ಚಿದಾನಂದ, ಗಿರೀಶ್, ರಾಜು, ರವಿ, ಬಸವರಾಜು, ದ್ಯಾಮಲಾಂಭ, ಪಾರ್ವತಮ್ಮ, ನೇತ್ರಾವತಿ ಹಾಗೂ ಇತರ 6 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜಾನಕಲ್ಲು ಗ್ರಾಮದ ಕೆರೆಯಂಗಳದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಜೂಜುಕೋರರು ಪೊಲೀಸರನ್ನು ನೋಡಿ ಪರಾರಿಯಾಗಿದ್ದಾರೆ. ಅವರನ್ನು ಪೊಲೀಸರು ಹಿಂಬಾಲಿಸಿದಾಗ ಒಂಟಿಯಾಗಿ ಹೋಗುತ್ತಿದ್ದ ಕಾನ್ಸ್ಟೆಬಲ್ ಮಂಜುನಾಥ್ ಅವರನ್ನು 15ಕ್ಕೂ ಹೆಚ್ಚು ಮಂದಿ ಸುತ್ತುವರಿದು ಗಲಾಟೆ ಮಾಡಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತೆರಳಿ ಗುಂಪಿನಲ್ಲಿದ್ದ ವಿರೂಪಾಕ್ಷಪ್ಪ, ಶರಣಪ್ಪ ಅವರು ದೊಣ್ಣೆಯನ್ನು ತೆಗೆದುಕೊಂಡು ತಲೆ, ಮೈ ಕೈಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಅವರ ಕಿರುಚಾಟ ಕೇಳಿಸಿಕೊಂಡು ಉಳಿದ ಪೊಲೀಸರು ಸ್ಥಳಕ್ಕೆ ಬಂದು ಅವರಿಂದ ಮಂಜುನಾಥ್ ಅವರನ್ನು ಬಿಡಿಸಿಕೊಂಡು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.