ADVERTISEMENT

ಸಂಕ್ರಾಂತಿಗೆ ಬಾಗಿನ ನೀಡಿದ ಶಾಸಕ ಗೌರಿಶಂಕರ್

3 ಸಾವಿರ ಮಹಿಳೆಯರಿಗೆ ಬಾಗಿನ, 1 ಲಾರಿ ಕಬ್ಬು ಹಾಗು ಎಳ್ಳು ಬೆಲ್ಲ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 15:29 IST
Last Updated 13 ಜನವರಿ 2020, 15:29 IST
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕ್ಷೇತ್ರದ ಮತದಾರರಿಗೆ ಸಂಕ್ರಾಂತಿ ಬಾಗಿನ ಅರ್ಪಿಸುತ್ತಿರುವ ದೃಶ್ಯ.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕ್ಷೇತ್ರದ ಮತದಾರರಿಗೆ ಸಂಕ್ರಾಂತಿ ಬಾಗಿನ ಅರ್ಪಿಸುತ್ತಿರುವ ದೃಶ್ಯ.   

ತುಮಕೂರು: ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶಾಸಕ ಡಿ.ಸಿ.ಗೌರಿಶಂಕರ್ 3 ಸಾವಿರ ಮಹಿಳೆಯರಿಗೆ ಬಾಗಿನ, 1 ಲಾರಿ ಕಬ್ಬು ಹಾಗು ಎಳ್ಳು ಬೆಲ್ಲ ವಿತರಿಸಿ ಶುಭಕೋರಿದರು.

‌ತಾಲ್ಲೂಕಿನ ಮಲ್ಲಸಂದ್ರದಲ್ಲಿ ಗ್ರಾಮಾಂತರ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮಾಂತರ ಕ್ಷೇತ್ರದ ಮಹಿಳೆಯರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಾಗಿನ ವಿತರಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕಾರಣದಲ್ಲಿ ನನಗೆ ಅಧಿಕಾರ ಇರಲಿ ಬಿಡಲಿ, ನಾನು ಬದುಕಿರುವವರೆಗೂ ಗ್ರಾಮಾಂತರ ಕ್ಷೇತ್ರದಲ್ಲಿನ ಹೆಣ್ಣು ಮಕ್ಕಳಿಗೆ ಬಾಗಿನ ನೀಡುತ್ತೇನೆ. ಅಧಿಕಾರ ನೀಡಿದವರಿಗೆ ಕೆಟ್ಟ ಹೆಸರು ತರದಂತೆ ಕೆಲಸ ಮಾಡುತ್ತೇನೆ ಎಂದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮಾಂತರ ಕ್ಷೇತ್ರಕ್ಕೆ ಮಂಜೂರಾಗಿದ್ದ ಒಂದು ₹1 ಕೋಟಿ ಅನುದಾನವನ್ನು ನಗರ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ಬಿಜೆಪಿಯವರು ಮಾಡುತ್ತಿರುವುದು ಏನು? ‌ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಸರಿಯಲ್ಲ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯಾಗಿದೆ. ತಪ್ಪು ಮಾಡಿರುವ ಬಿಜೆಪಿ ಅಧಿಕಾರ ದರ್ಪದಿಂದ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲದಂತಾಗಿದೆ, ಇನ್ನು ಅನೇಕ ಸಿಡಿಗಳು ಹೊರಗೆ ಬರುತ್ತವೆ ಎಂದು ಎಚ್ಚರಿಸಿದರು.

ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ಪ್ರಮುಖರಾದ ಗೂಳೂರು ಪುಟ್ಟರಾಜು, ವೈ.ಟಿ.ನಾಗರಾಜು, ಹಿರೇಹಳ್ಳಿ ಮಹೇಶ್, ಸುವರ್ಣಾ ಗಿರಿಕುಮಾರ್, ಪಾಲನೇತ್ರಯ್ಯ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.