ADVERTISEMENT

ಭದ್ರಾ ನೀರು: ಮಹನೀಯರ ಹೋರಾಟದ ಫಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 6:07 IST
Last Updated 3 ಆಗಸ್ಟ್ 2020, 6:07 IST
ಭದ್ರಾ ಮೇಲ್ದಂಡೆ ಯೋಜನೆಯ 135 ಕಿ.ಮೀ ಉದ್ದದ ನಾಲೆಯ ಭೂಮಿಪೂಜೆಯನ್ನು ಜೆ.ಸಿ.ಮಾಧುಸ್ವಾಮಿ ನೆರವೇರಿಸಿದರು
ಭದ್ರಾ ಮೇಲ್ದಂಡೆ ಯೋಜನೆಯ 135 ಕಿ.ಮೀ ಉದ್ದದ ನಾಲೆಯ ಭೂಮಿಪೂಜೆಯನ್ನು ಜೆ.ಸಿ.ಮಾಧುಸ್ವಾಮಿ ನೆರವೇರಿಸಿದರು   

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಯಲು ಅನೇಕ ಮಹನೀಯರ ಹೋರಾಟವೇ ಕಾರಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಭಾನುವಾರ ಭದ್ರಾ ಮೇಲ್ದಂಡೆ ಯೋಜನೆಯ 135 ಕಿ.ಮೀ. ಉದ್ದದ ತುಮಕೂರು ನಾಲೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಟದ ಕಾಲದಲ್ಲಿ ಈ ಯೋಜನೆ ಫಲಪ್ರದವಾಗುತ್ತದೆಯೇ ಎಂಬುದರ ಬಗ್ಗೆ ಪ್ರಶ್ನೆ ಮಾಡಿದವರಲ್ಲಿ ನಾನು ಒಬ್ಬ. ಆದರೆ, ತಾಲ್ಲೂಕಿನ ಅನೇಕ ಮಹನೀಯರು ನಡೆಸಿದ ಹೋರಾಟದ ಫಲವಾಗಿ ಇಂದು ಯೋಜನೆ ಸಾಕಾರಗೊಂಡಿದೆ. ಅಂತಹ ಮಹನೀಯರನ್ನು ಸ್ಮರಿಸುವುದರ ಜತೆ ಯೋಜನೆ ಅನುಷ್ಠಾನಗೊಳ್ಳಲು ರೈತರು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು. ರೈತರು ತುರ್ತಾಗಿ ಸ್ಪಂದಿಸಿದರೆ ಯೋಜನೆ ಅದಷ್ಟು ಬೇಗ ಪೂರ್ಣಗೊಳ್ಳಲಿದೆ’ ಎಂದರು.

ADVERTISEMENT

‘ರೈತರಿಗೆ ನೀರು ಮತ್ತು ವಿದ್ಯುತ್‌ ಉತ್ತಮವಾಗಿದ್ದರೆ ಯಾರೂ ಪಟ್ಟಣಗಳತ್ತ ಬರಲಾರರು ಎನ್ನುವ ದೃಷ್ಟಿಯಿಂದ ತಾಲ್ಲೂಕು ವ್ಯಾಪ್ತಿಯಲ್ಲಿ 5 ವಿದ್ಯುತ್‌ ಉಪಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ದೊಡ್ಡಎಣ್ಣೇಗೆರೆ ಭಾಗದ ರೈತರ ವಿದ್ಯುತ್‌ ಕೊರತೆ ನೀಗಿಸಲು ಡಿಂಕನಹಳ್ಳಿ ಬಳಿ ₹400 ಕೋಟಿ ವೆಚ್ಚದ ವಿದ್ಯುತ್‌ ಉಪಸ್ಥಾವರ ನಿರ್ಮಾಣವಾಗಲಿದೆ’ ಎಂದರು.

ಮುಖಂಡರಾದ ಕೆಂಕೆರೆ ನವೀನ್‌, ಹೊಸಹಳ್ಳಿ ಜಯಣ್ಣ, ಟೈಲರ್‌ ಪರಮೇಶ್‌, ಬೊಮ್ಮೇನಹಳ್ಳಿ ಸ್ವಾಮಿ, ಭಟ್ಟರಹಳ್ಳಿ ದಿನೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.