ADVERTISEMENT

ತುಮಕೂರು | ಬೈಕ್ ಕಳ್ಳತನ: ಮೂವರು ಎಳನೀರು ವ್ಯಾಪಾರಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 5:09 IST
Last Updated 21 ಏಪ್ರಿಲ್ 2024, 5:09 IST
   

ತುಮಕೂರು: ನಗರದ ವಿವಿಧೆಡೆ ಬೈಕ್‌ ಕಳ್ಳತನ ಮಾಡುತ್ತಿದ್ದ ಮೂವರು ಎಳನೀರು ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿ, 7 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಕೋತಿತೋಪು ನಿವಾಸಿಗಳಾದ ಸುದೀಪ್‌ (24), ರಾಮಮೂರ್ತಿ (22), ಗುಬ್ಬಿ ತಾಲ್ಲೂಕಿನ ತಗ್ಗಿಹಳ್ಳಿಯ ರಂಗನಾಥ್‌ (27) ಬಂಧಿತ ಕಳ್ಳರು.

ಏ.16 ರಂದು ತಾಲ್ಲೂಕಿನ ನಾಗವಲ್ಲಿಯ ಗಂಗರಾಜು ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿತ್ತು. ಈ ಕುರಿತು ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದ ತನಿಖೆಗೆ ಕ್ಯಾತ್ಸಂದ್ರ ಠಾಣೆಯ ಸಿಪಿಐ ರಾಮಪ್ರಸಾದ್‌ ನೇತೃತ್ವದಲ್ಲಿ ಹೆಬ್ಬೂರು ಪಿಎಸ್‌ಐ ಜಿ.ಎಸ್‌.ಭೈರೇಗೌಡ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.

ADVERTISEMENT

ಪ್ರಕರಣದ ಜಾಡು ಹಿಡಿದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ₹4.60 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ರಾಮಪ್ರಸಾದ್‌, ಪಿಎಸ್‌ಐಗಳಾದ ಜಿ.ಎಸ್‌.ಭೈರೇಗೌಡ, ಕೃಷ್ಣಮೂರ್ತಿ, ಸಿಬ್ಬಂದಿಯಾದ ಕೆ.ರಾಜಣ್ಣ, ರಮೇಶ್‌ ಹನುಮರಂಗಯ್ಯ, ಸೈಯದ್‌ ಇರ್ಫಾತ್‌ ಅಲಿ, ಕಿರಣ್‌ ಬಸವರಾಜು, ಸಂತೋಷ್‌, ವಿರೂಪಾಕ್ಷ, ಕಿಶೋರ್‌, ಸುರೇಶ್‌ ಅವರು ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.