ADVERTISEMENT

ದೇಶ ದಿವಾಳಿ ಮಾಡಿದ ಬಿಜೆಪಿ: ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 13:33 IST
Last Updated 17 ಜನವರಿ 2020, 13:33 IST
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ   

ತುಮಕೂರು: ಮೋದಿ ಸರ್ಕಾರ ಬಂದ ನಂತರ ದೇಶದ ಆರ್ಥಿಕತೆ ದಿವಾಳಿಯತ್ತ ಸಾಗುತ್ತಿದೆ. ಇದು ಹೀಗೆ ಮುಂದುವರೆದರೇ ಕಾಂಗ್ರೆಸ್ ಮುಕ್ತ ಭಾರತವಲ್ಲ, ಬಿಜೆಪಿ ಮುಕ್ತ ಭಾರತವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಭವಿಷ್ಯ ನುಡಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದೀಗ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಬೇಕಿದ್ದ ₹5600 ಕೋಟಿ ಜಿಎಸ್‌ಟಿ ಹಣ, ₹2857 ಕೋಟಿ ನರೇಗಾ ಹಣ ಕೇಂದ್ರ ನೀಡಿಲ್ಲ. ಯಡಿಯೂರಪ್ಪ ₹50 ಸಾವಿರ ಕೋಟಿ ಬೇಡಿಕೆ ಇಟ್ಟರೇ ಒಮ್ಮೆ ₹1200 ಕೋಟಿ, ಮತ್ತೊಮ್ಮೆ ₹600 ಕೋಟಿ ಹಣವನ್ನು ಮಕ್ಕಳಿಗೆ ಚಾಕಲೇಟ್ ನೀಡುವಂತೆ ನೀಡಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಸೇಡಿನ ರಾಜಕಾರಣ ಮಾಡುವುದರಲ್ಲಿ ಮೋದಿ, ಅಮಿತ್ ಶಾ ಎತ್ತಿದ ಕೈ. ಜನರ ಮುಂದೆ ಸುಳ್ಳು ಹೇಳುವ ಪ್ರವೃತ್ತಿ ಬಿಜೆಪಿ ನಾಯಕರಿಗೆ ಕರಗತವಾಗಿದೆ. ಇದೀಗ ತಮ್ಮ ವೈಫಲ್ಯ ಮರೆಮಾಚಲು ಜನರ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಂತಹ ಸಂವಿಧಾನ ಬಾಹಿರ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವುದು ಸರಿಯಲ್ಲ ಎಂದರು.

ADVERTISEMENT

ಬಿಜೆಪಿಯಲ್ಲಿ ಯಡಿಯೂರಪ್ಪ ಮಾತಿಗೆ ಬೆಲೆಯೇ ಇಲ್ಲ. 2011ರಲ್ಲಿ ಯಡಿಯೂರಪ್ಪನವರ ರಾಜಕೀಯ ಜೀವನ ಮುಗಿಸಲು ಯತ್ನಿಸಿದ ಶಕ್ತಿಗಳೇ ಇಂದು ಅವರನ್ನು ಮತ್ತೆ ಮುಗಿಸಲು ಯತ್ನಿಸುತ್ತಿವೆ. ನಮ್ಮ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋದವರಿಗೆ 24 ಗಂಟೆಯಲ್ಲಿ ಮಂತ್ರಿ ಮಾಡುತ್ತೇವೆ ಎಂದಿದ್ದರು. 24 ದಿನವಾದರೂ ಯಡಿಯೂರಪ್ಪನವರಿಗೆ ಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಅವರು 4 ಬಾರಿ ಮುಖ್ಯಮಂತ್ರಿಯಾದರೂ ರಾಜ್ಯದ ಜನ ಒಮ್ಮೆಯೂ ಅವರಿಗೆ ನೇರವಾಗಿ ಅಧಿಕಾರ ನೀಡಿಲ್ಲ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ, ‘ಬಿಜೆಪಿಯವರು ದೇಶದ ಸಮಸ್ಯೆ ಮರೆಮಾಚಲು ತಾವೇ ಒಂದೊಂದು ಸಮಸ್ಯೆ ಸೃಷ್ಟಿಸಿ ಜನರ ಮುಂದಿಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರ ಸುಳ್ಳು, ಒಡೆದು ಆಳುವ ನೀತಿಗಳು ಜನರಿಗೆ ಅರ್ಥವಾಗಿದ್ದು, ಸ್ವಯಂಪ್ರೇರಿತರಾಗಿ ಬಿಜೆಪಿ ವಿರುದ್ಧ ದಂಗೆ ಎದ್ದಿದ್ದಾರೆ’ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಪ್ರಮುಖರಾದ ನಿರಂಜನ್, ಚಂದ್ರಣ್ಣ, ಸುಜಾತಾ, ವೈ.ಎನ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.