ತುರುವೇಕೆರೆ: ‘ಕನ್ನಡದ ಕಣ್ವ’ ಎಂಬ ಬಿರುದಾಂಕಿತ ಬಿ.ಎಂ.ಶ್ರೀಕಂಠಯ್ಯ ಸ್ಮರಣಾರ್ಥ ತಾಲ್ಲೂಕಿನ ಸಂಪಿಗೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಬಿಎಂಶ್ರೀ ಭವನ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಯಾವುದೇ ಸಾಂಸ್ಕೃತಿಕ, ಸಾಹಿತ್ಯದ ಚಟುವಟಿಕೆಗಳು ನಡೆಯದೆ ಮೂಲಗುಂಪಾಗಿದೆ.
ಭವನ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಸಂದಿವೆ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮಗಳು ವಿರಳ. ಭವನದ ಒಳಗೆ ಜೇಡನ ಬಲೆ ಕಟ್ಟಿದ್ದು, ದೂಳು ಹಿಡಿದಿದೆ. ಮಳೆಗೆ ಅಲ್ಲಲ್ಲಿ ಕಟ್ಟಡದ ಚಾವಣಿ ನೆನೆದು ಗೋಡೆ ಕಪ್ಪಾಗಿದೆ. ಕಿಟಕಿಗಳ ಗಾಜು ಸಹ ಒಡೆದಿದೆ. ಕೆಲವು ಕಿಟಕಿಗಳಿಗೆ ಕಬ್ಬಿಣದ ತಗಡು, ಪ್ಲೇವುಡ್ನಿಂದ ಮುಚ್ಚಲಾಗಿದೆ.
ಭವನದ ಗೋಡೆ, ಮೆಟ್ಟಿಲುಗಳು ಬಿರುಕು ಬಿಟ್ಟಿದ್ದು, ಭವನದ ಎಡ, ಬಲ ಭಾಗದಲ್ಲಿ ಗಿಡಗಳು ಬೆಳೆದಿವೆ. ಭವನದ ಪಕ್ಕದಲ್ಲಿ ಕಸಕಡ್ಡಿಗಳು ರಾಶಿ ಬಿದ್ದು ಹುಳುಗಳ ಆವಾಸ ಸ್ಥಾನವಾಗಿದೆ. ಭವನದ ಮೆಟ್ಟಿಲಿನ ಕಲ್ಲುಗಳು ಮುರಿದಿವೆ. ಭವನದ ಗೇಟ್ಗೆ ಬೀಗ ಹಾಕದಿರುವುದರಿಂದ ನಾಯಿ, ಇನ್ನಿತರ ಪ್ರಾಣಿಗಳು ಮಲಗಿ ಗಲೀಜು ಮಾಡುತ್ತಿವೆ.
ಸುಣ್ಣ ಬಣ್ಣ ಕಾಣದ ಕಟ್ಟಡ ಪಾಳು ಬಂಗಲೆಯಂತೆ ಭಾಸವಾಗುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಭವನ ಶಿಥಿಲವಾಗಿದ್ದು ಬೀಳುವ ಮುನ್ನ ಜಿಲ್ಲಾಡಳಿತ ದುರಸ್ತಿಮಾಡಬೇಕು ಎನ್ನುತ್ತಾರೆ ಸಾಹಿತ್ಯಾಸಕ್ತರು.ಬಿಎಂಶ್ರೀ ತಾಯಿ ನಮ್ಮ ಗ್ರಾಮದವರೆಂಬುದು ಹೆಮ್ಮೆಯ ವಿಷಯ. ಹಾಗಾಗಿ ಸರ್ಕಾರ ಭವನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಂಗಳಿಗೊಂದು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಿ. ಎಸ್.ಎನ್. ಯೋಗೀಶ್ ಸಂಪಿಗೆ
ಬಿಎಂಶ್ರೀ ತಾಯಿ ನಮ್ಮ ಗ್ರಾಮದವರೆಂಬುದು ಹೆಮ್ಮೆಯ ವಿಷಯ. ಹಾಗಾಗಿ ಸರ್ಕಾರ ಭವನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಂಗಳಿಗೊಂದು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಿ.ಎಸ್.ಎನ್. ಯೋಗೀಶ್ ಸಂಪಿಗೆ
ಸಂಪಿಗೆ ಗ್ರಾಮ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳ. ಅಲ್ಲಿ ಶ್ರೀನಿವಾಸ ದೇವಾಲಯವಿದೆ. ಕಲಾವಿದರು ಜನಪದ ಕೃಷಿ ಹೀಗೆ ಸಾಕಷ್ಟು ಪ್ರಸಿದ್ಧ ಪಡೆದ ಗ್ರಾಮ. ಇದನ್ನು ಪ್ರವಾಸೋದ್ಯಮ ಗ್ರಾಮವಾಗಿ ಮಾಡಿದರೆ ಬಿಎಂಶ್ರೀ ಭವನವೂ ಜನಪ್ರಿಯವಾಗಲಿದೆ.ನಂರಾಜು ಮುನಿಯೂರು ಕಸಾಪ ಮಾಜಿ ಅಧ್ಯಕ್ಷ
ಸಂಪಿಗೆಯಲ್ಲಿರುವ ಬಿಎಂಶ್ರೀ ಭವನದ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆ ಜಿಲ್ಲಾಡಳಿತದ್ದೇ ಹೊರತು ತುರುವೇಕೆರೆ ಕಸಾಪದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ನಾವು ಅದಕ್ಕೆ ಹಸ್ತಕ್ಷೇಪ ಮಾಡಲಾಗದು.ಡಿ.ಪಿ.ರಾಜು ಕಸಾಪ ತಾಲ್ಲೂಕು ಅಧ್ಯಕ್ಷ
ನಿರ್ವಹಣೆ ಜವಾಬ್ದಾರಿ ಗ್ರಾ.ಪಂ.ಗೆ ನೀಡಿ: ನಟರಾಜ ಕಲ್ಕೆರೆ
‘ನಾನು ಅಧ್ಯಕ್ಷೆಯಾಗಿದ್ದ ಅವಧಿಯಲ್ಲೇ ಬಿಎಂಶ್ರೀ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ಗೆ ನೀಡಿ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದೆ. ಹೋಬಳಿ ಘಟಕದ ಪದಾಧಿಕಾರಿಗಳು ಗ್ರಾಮಸ್ಥರು ಆಸಕ್ತಿ ವಹಿಸಿ ಭವನ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಭವನದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಿದರೆ ಉತ್ತಮ. ಅಲ್ಲಿನ ಅನುದಾನದಲ್ಲಿ ಕನಿಷ್ಠ ಸುಣ್ಣ ಬಣ್ಣ ಬಳಿಸಲು ಗ್ರಂಥಾಲಯ ಮಾಡಲು ಅವಕಾಶವಿರುತ್ತದೆ. ಪರಿಷತ್ಗೆ ಕೊಟ್ಟರೆ ಅಲ್ಲಿ ಅನುದಾನದ ಕೊರತೆಯಿಂದ ಏನು ಕೆಲಸವಾಗದು. ಜಿಲ್ಲಾಡಳಿತ ತನ್ನ ವ್ಯಾಪ್ತಿಯ ಇಲಾಖೆಗಳನ್ನು ನಿರ್ವಹಿಸುವುದೇ ಸವಾಲು. ಅಂತಹದರಲ್ಲಿ ಈ ಭವನವನ್ನು ನೋಡಿಕೊಳ್ಳುವುದು ದೂರದ ಮಾತು. ಬಾ.ಹ. ರಮಾಕುಮಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಕನ್ನಡತ್ವವನ್ನು ಕಟ್ಟಿದ ಪ್ರಾತಃಸ್ಮರಣೀಯರಲ್ಲಿ ಮುಂಚೂಣಿಯಲ್ಲಿದ್ದ ಬಿಎಂಶ್ರೀ ನೆನಪಿನ ಭವನ ದುರಸ್ತಿಗೊಳಿಸಬೇಕು. ಅಲ್ಲಿ ಕನ್ನಡ ಅನುರಣಿಸುವಂತೆ ಮಾಡುವ ಕನ್ನಡೋದ್ಧಾರದ ಕನಸು ಕಾಣುವ ಚರ್ಚೆ ವಿಚಾರ ಸಂಕಿರಣ ಕನ್ನಡ ಅಧ್ಯಯನ ನಡೆಯುವ ಸ್ಥಳವನ್ನಾಗಿ ಪುನರುಜ್ಜೀವನಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.