
ತುಮಕೂರು: ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳು ತ್ವರಿತ ಲಾಭಕ್ಕಾಗಿ ದುಡಿಯುವ ವರ್ಗವನ್ನು ದುರ್ಬಲಗೊಳಿಸುವ ಹಾಗೂ ಪರಿಸರ ನಾಶದ ಯೋಜನೆ ರೂಪಿಸುತ್ತಿದ್ದಾರೆ ಎಂದು ಪರಿಸರವಾದಿ ಸಿ.ಯತಿರಾಜು ಹೇಳಿದರು.
ನಗರದಲ್ಲಿ ಶನಿವಾರ ಸಿಪಿಎಂ, ಕೆಂಪು ಪುಸ್ತಕ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಕೆಂಪು ಪುಸ್ತಕ ದಿನಾಚರಣೆ, ‘ಯು.ಎಸ್.ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲೆಡೆ ಕೃತಕ ಬುದ್ಧಿಮತ್ತೆ (ಎಐ) ವ್ಯಾಪಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಪೀಳಿಗೆ ಏನು ಕಲಿಯಬೇಕು, ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಗೊಂದಲ ಉಂಟಾಗಿದೆ. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಇಂದಿನ ನವೀನತೆ ನಾಳೆ ಹಳೆಯದಾಗುತ್ತಿದೆ ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘1848ರ ಫೆ. 21ರಂದು ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್ ರಚಿಸಿದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ವಿಶ್ವದ ಕ್ರಾಂತಿಕಾರಿ ಚಿಂತನೆಗೆ ದಿಕ್ಕು ತೋರಿತು. ಈ ವರ್ಷ ಕೆಂಪು ಪುಸ್ತಕ ದಿನವನ್ನು ಸಾಮ್ರಾಜ್ಯಶಾಹಿ ವಿರೋಧದ ವಿಷಯದ ಸುತ್ತ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
ಮುಖಂಡ ಸುಬ್ಬಯ್ಯ, ‘ಸಾಮ್ರಾಜ್ಯಶಾಹಿ ಹಾಗೂ ಕೋಮುವಾದ ಶಕ್ತಿಗಳು ಒಂದಾಗಿ ದೇಶದ ದುಡಿಯುವ ಜನರ ಸಮಸ್ಯೆಗಳನ್ನು ಗಂಭೀರಗೊಳಿಸುತ್ತಿವೆ. ಬಂಡವಾಳಶಾಹಿಗಳ ಲಾಭಕೋರ ನೀತಿ ಸೋಲಿಸಲು ಜನತೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.
ಮುಖಂಡರಾದ ಬಿ.ಉಮೇಶ್, ಶಿವಲಿಂಗಯ್ಯ, ಷಣ್ಮುಖಪ್ಪ, ಲೋಕೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.