ಶಿರಾ: ಬಿಜೆಪಿ ಪಾಪದ ಹಣದಿಂದ ಶಿರಾ ಕ್ಷೇತ್ರವನ್ನು ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದೆ. ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನು ಆಯ್ಕೆ ಮಾಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ತಾಲ್ಲೂಕಿನ ಕೊಟ್ಟ ಗ್ರಾಮದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದರು.
ಜೆಡಿಎಸ್ನಲ್ಲಿ ಕೆಲವರು ಅಧಿಕಾರ ಅನುಭವಿಸಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅದರೆ ಕಾರ್ಯಕರ್ತರ ಪಡೆ ನಮ್ಮ ಜೊತೆಯಲ್ಲಿದೆ. ಈ ನಾಯಕರಿಗೆ ಮುಂದಿನ ದಿನಗಳಲ್ಲಿ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾರೆ ಎಂದರು.
ರೈತರ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ರೈತ ಪರವಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಜೊತೆಗೆ ಸತ್ಯಣ್ಣ ಶಾಸಕರಾಗಿದ್ದ ಸಮಯದಲ್ಲಿ 17 ಸಾವಿರ ಸಾಗುವಳು ಚೀಟಿಗಳನ್ನು ನೀಡುವ ಮೂಲಕ ರೈತರ ಬದುಕನ್ನು ಹಸನು ಮಾಡಿದ್ದಾರೆ. ಈ ಬಾರಿ ಸತ್ಯಣ್ಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಮತ ನೀಡಿ ಜೆಡಿಎಸ್ಗೆ ಆರ್ಶೀವಾದ ಮಾಡಬೇಕು ಎಂದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಸತ್ಯನಾರಾಯಣ ಶಾಸಕನಾಗಿದ್ದ ಸಮಯದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ₹280 ಕೋಟಿ ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ಕಾಣುವಂತಾಗಿದೆ’ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ‘ಜೆಡಿಎಸ್ ಪ್ರಾಮಾಣಿಕ ಕಾರ್ಯಕರ್ತರಿಂದ ಕೂಡಿದ್ದು, ಯಾವುದೇ ಕಾರಣಕ್ಕೂ ಸೋಲುವ ಪ್ರಶ್ನೆ ಇಲ್ಲ. ದೇವೇಗೌಡರು ಹಾಗೂ ಕುಮಾರ ಸ್ವಾಮಿ ಮಾರ್ಗದರ್ಶನದಲ್ಲಿ ಪಕ್ಷ ಗೆಲುವು ಸಾಧಿಸುವುದು’ ಎಂದರು.
ಅಭ್ಯರ್ಥಿ ಅಮ್ಮಾಜಮ್ಮ, ಬಿ.ಎಸ್.ಸತ್ಯಪ್ರಕಾಶ್, ಟಿ.ಡಿ.ಮಲ್ಲೇಶ್, ಲಿಂಗದಹಳ್ಳಿ ಚೇತನಕುಮಾರ್
ಇದ್ದರು.
ಕಳ್ಳಂಬೆಳ್ಳ ಹೋಬಳಿಯಲ್ಲಿ ಶಾಸಕ ಗೌರಿಶಂಕರ್ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡಿದರು. ಹುಲಿಕುಂಟೆ ಹೋಬಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ನಡೆಸಿದರು. ಸಂಜೆ ಗೌಡಗೆರೆ ಹೋಬಳಿಯ ಮಖಂಡರ ಸಭೆಯನ್ನು ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.