
ಚಿಕ್ಕನಾಯಕನಹಳ್ಳಿ: ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (ಆರ್ಕೆವಿವೈ) ಅಡಿ ತಾಲ್ಲೂಕಿನ ರೈತರಿಗೆ ಜಮೀನುಗಳಲ್ಲಿ ನೆಟ್ಟು ಬೆಳೆಸಲು ಅನುಗುಣವಾದಂತಹ ಐದು ಸಾವಿರ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ವಲಯಾಧಿಕಾರಿ ಜಯರಾಮ್ ಜಿ.ಆರ್.ತಿಳಿಸಿದರು.
ಹೊನ್ನೆ, ಮಹಾಗನಿ, ಹಲಸು, ಜಮ್ಮುನೇರಳೆ, ನಾಯಿನೇರಳೆ, ಹುಣಸೆ ಜಾತಿಯ ಸಸಿಗಳನ್ನು ರೈತರಿಗೆ ಅವರ ಜಮೀನಿನ ವಿಸ್ತೀರ್ಣ ಆಧರಿಸಿ ಉಚಿತವಾಗಿ ನೀಡಲಾಗುವುದು. ಒಂದು ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ರೈತರಿಗೆ ಗರಿಷ್ಠ 100 ಗಿಡ, ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಅವರ ಜಮೀನಿನ ವಿಸ್ತೀರ್ಣ ಆಧರಿಸಿ ಗಿಡ ನೀಡಲಾಗುತ್ತದೆ ಎಂದರು.
ಆಸಕ್ತರು ಜಮೀನಿನ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರದ ಪ್ರತಿ ಸಲ್ಲಿಸಿ, ಇಲಾಖೆಯ ತರಬೇನಹಳ್ಳಿ ಅಥವಾ ಕಂದಿಕೆರೆ ನರ್ಸರಿಗಳಿಂದ ಗಿಡ ಪಡೆದುಕೊಳ್ಳಬಹುದು. ಜಮೀನಿನಲ್ಲಿ ಗುಣಿ ತೋಡಿರುವ ಮತ್ತು ಗಿಡಗಳನ್ನು ನೆಟ್ಟಿರುವ ಎರಡು ಫೊಟೊಗಳನ್ನು ಇಲಾಖೆಗೆ ಒದಗಿಸಬೇಕು ಎಂದು ಹೇಳಿದರು.
ಆರ್ಎಸ್ಪಿಡಿ ಯೋಜನೆಯಡಿ ರಿಯಾಯಿತಿ ದರದಲ್ಲಿ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ಕಸಿ ಮಾವಿನ ಗಿಡ, ಅಗಸೆ ಗಿಡ ಲಭ್ಯವಿವೆ ಎಂದರು.
ಜೂನ್ 5ರಂದು ಪರಿಸರ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಇಲಾಖೆಯಿಂದ ಗಿಡಗಳನ್ನು ಒದಗಿಸಲಾಗುವುದು. ನಂತರ ಆ ಗಿಡಗಳ ರಕ್ಷಣೆ ಹಾಗೂ ಪೋಷಣೆ ಹೊಣೆ ಗ್ರಾಮ ಪಂಚಾಯಿತಿ ಮತ್ತು ಅಲ್ಲಿನ ಗ್ರಾಮಸ್ಥರದ್ದೇ ಆಗಿರುತ್ತದೆ ಎಂದು ಹೇಳಿದರು
ಮುಂಬರುವ ಮಳೆಯ ಪ್ರಮಾಣ ನೋಡಿಕೊಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೀಡ್-ಬಾಲ್ (ಬೀಜದುಂಡೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.