
ತುಮಕೂರು: ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಅಟವೀ ಸುಕ್ಷೇತ್ರದಲ್ಲಿ ಗುರುವಾರ ಮಕರ ಸಂಕ್ರಾಂತಿ ಅಂಗವಾಗಿ ಜಾತ್ರಾ ಮಹೋತ್ಸವ, ಲಿಂಗೈಕ್ಯ ಅಟವೀ ಸಿದ್ಧಲಿಂಗ ಸ್ವಾಮೀಜಿ 76ನೇ ಸ್ಮರಣೋತ್ಸವ ನೆರವೇರಿತು.
ಸಹಸ್ರಾರು ಭಕ್ತರು ಮಹಾಶಿವಯೋಗಿ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅಟವೀ ಶಿವಲಿಂಗ ಸ್ವಾಮೀಜಿ, ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರೇಮಠದ ಅಟವೀ ಚನ್ನಬಸವ ಸ್ವಾಮೀಜಿ ಭಕ್ತರಿಗೆ ಎಳ್ಳು, ಬೆಲ್ಲ ಹಂಚಿ ಆಶೀರ್ವದಿಸಿದರು.
ಓಂಕಾರೇಶ್ವರ ಶಿವಯೋಗಿ, ಜಡೆಶಾಂತ ಬಸವ ಶಿವಯೋಗಿ, ಅಟವೀ ಶಿವಯೋಗಿ, ಅಟವೀ ಸಿದ್ಧಲಿಂಗ ಸ್ವಾಮೀಜಿ ಗದ್ದುಗೆಗೆ ಮಹಾ ರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತ ಬಿಲ್ವಾರ್ಚನೆ ನೆರವೇರಿತು. ನಂತರ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಮಠದವರೆಗೆ ಓಂಕಾರ ಶಿವಯೋಗಿ, ಅಟವೀ ಶಿವಯೋಗಿ ಉತ್ಸವ ವೈಭವದಿಂದ ನಡೆಯಿತು. ಸುಮಂಗಲಿಯರು ಕಳಸ ಹೊತ್ತು, ಆರತಿಯೊಂದಿಗೆ ಸಾಗಿದರು. ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಿತು.
ಮಠದ ಕಾರ್ಯಾಧ್ಯಕ್ಷ ಟಿ.ಬಿ.ಶೇಖರ್, ಪ್ರಮುಖರಾದ ಜಗದೀಶ್ಚಂದ್ರ, ಕೆ.ವಿ.ಬೆಟ್ಟಯ್ಯ, ಮಹದೇವಪ್ಪ, ವಿಶ್ವನಾಥ್ ಅಪ್ಪಾಜಪ್ಪ, ಬೆಟ್ಟಲಿಂಗಯ್ಯ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.