ADVERTISEMENT

ಬೆಂಗಳೂರಿನಿಂದ ಬಂದವರು ಸ್ವಚ್ಛತೆ ಕೈಗೊಂಡರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 14:34 IST
Last Updated 22 ಏಪ್ರಿಲ್ 2020, 14:34 IST
ಹುಲಿಯೂರುದುರ್ಗ ಹೋಬಳಿಯ ಮೇದರದೊಡ್ಡಿಯಲ್ಲಿ ಚರಂಡಿಯ ಸ್ವಚ್ಛತಾ ಕಾಮಗಾರಿಯಲ್ಲಿ ತೊಡಗಿರುವ ಯುವಕರು
ಹುಲಿಯೂರುದುರ್ಗ ಹೋಬಳಿಯ ಮೇದರದೊಡ್ಡಿಯಲ್ಲಿ ಚರಂಡಿಯ ಸ್ವಚ್ಛತಾ ಕಾಮಗಾರಿಯಲ್ಲಿ ತೊಡಗಿರುವ ಯುವಕರು   

ಹುಲಿಯೂರುದುರ್ಗ: ಕೆಲಸ ಅರಸಿ ಬೆಂಗಳೂರಿಗೆ ತೆರಳಿ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹೋಬಳಿಯ ಮೇದರದೊಡ್ಡಿ ಗ್ರಾಮದ ಕೆಲವರು ಕೊರೊನಾ ಭೀತಿಯಿಂದ ಸ್ವಗ್ರಾಮಕ್ಕೆ ಮರಳಿದ ನಂತರ ಕೈ ಚೆಲ್ಲಿ ಕೂರದೆ ಬದುಕನ್ನು ಸಹ್ಯವಾಗಿಸಿಕೊಂಡಿದ್ದಾರೆ. ದುಡಿಯುವ ಕೈಗಳು ಮುಂದಾಗಿದ್ದರೆ ಕೆಲಸ ದೊರೆಯುವುದೇನೂ ಹೆಚ್ಚಲ್ಲ ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.

ತಾವರೆಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ತಮ್ಮ ಗ್ರಾಮದ ಚರಂಡಿಗಳ ಸ್ವಚ್ಛತಾ ಕಾಮಗಾರಿಯನ್ನು ತಮಗೇ ನೀಡಬೇಕೆಂದು ಮನವೊಲಿಸುವಲ್ಲಿ ಯಶಸ್ವಿಯಾದ ಯುವಕರು ಜನ ಒಪ್ಪುವಂತೆ ಕೆಲಸ ಮಾಡಿದ್ದಾರೆ.

‘ನಿರ್ಮಾಣಗೊಂಡ ದಿನದಂದಲೂ ನಿರ್ವಹಣೆ ಇಲ್ಲದೆ ಕಲ್ಲು- ಮಣ್ಣು, ಹುಲ್ಲು- ಗಿಡಗಂಟಿಗಳಿಂದ ಬಹುತೇಕ ಮುಚ್ಚಿಹೋಗಿದ್ದ ಗ್ರಾಮದ ಚರಂಡಿಗಳನ್ನು ಮಳೆಗಾಲದ ಮುನ್ನಾ ದಿನಗಳಲ್ಲಿ ಸ್ವಚ್ಛಗೊಳಿಸಿರುವುದು ಸಕಾಲಿಕವಾಗಿದೆ’ ಎಂದು ಹನುಮಯ್ಯ ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಸ್ವಂತದ ಕ್ಯಾಂಟರ್, ಆಟೊ ಓಡಿಸುತ್ತಿದ್ದವರು, ಬ್ಯಾಂಕ್ - ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಮಾರುಕಟ್ಟೆಗಳಲ್ಲಿ ವಾಹನಗಳಿಗೆ ಸರಕು ತುಂಬುತ್ತಿದ್ದವರು ಊರಿನ ಸ್ವಚ್ಛತಾ ಕಾರ್ಯ ಮಾಡಿದವರಲ್ಲಿ ಸೇರಿದ್ದಾರೆ.

ಶಿವರಾಜು, ಅಂದಾನಯ್ಯ, ವೆಂಕಟಗಿರಯ್ಯ, ಎಂ.ಡಿ.ಮಹಲಿಂಗಯ್ಯ, ದೇವರಾಜು ಸೇರಿದಂತೆ ಹದಿನೆಂಟು ಕೆಲಸಗಾರರು ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.