ADVERTISEMENT

ತುಮಕೂರು: ಚಳಿಗೆ ಥಂಡಾ ಹೊಡೆದ ಜನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:07 IST
Last Updated 23 ಡಿಸೆಂಬರ್ 2025, 7:07 IST
ತುಮಕೂರಿನಲ್ಲಿ ಸೋಮವಾರ ಬೆಳಿಗ್ಗೆ ಆವರಿಸಿದ ದಟ್ಟ ಮಂಜಿನಲ್ಲಿ ಸಾಗಿದ ವಾಹನ
ತುಮಕೂರಿನಲ್ಲಿ ಸೋಮವಾರ ಬೆಳಿಗ್ಗೆ ಆವರಿಸಿದ ದಟ್ಟ ಮಂಜಿನಲ್ಲಿ ಸಾಗಿದ ವಾಹನ   

ತುಮಕೂರು: ವರ್ಷದ ಕೊನೆಯಲ್ಲಿ ತಾಪಮಾನ ಕುಸಿತ ಕಾಣುತ್ತಿದ್ದು, ಸೋಮವಾರ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿದೆ.

ಕಳೆದ ಒಂದು ವಾರದಿಂದ ಚಳಿಯ ತೀವ್ರತೆ ಹೆಚ್ಚಾಗಿದೆ. ಡಿ. 17ರಂದು ಗರಿಷ್ಠ 28, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. 18ರಂದು ಕನಿಷ್ಠ ತಾಪಮಾನ 13ಕ್ಕೆ ಇಳಿಕೆಯಾಗಿದೆ. ಕಳೆದ ನಾಲ್ಕು–ಐದು ದಿನಗಳಿಂದ ತಾಪಮಾನ ಕುಸಿತ ಕಾಣುತ್ತಲೇ ಇದೆ. ಬೆಳಿಗ್ಗೆ 9 ಗಂಟೆಯಾದರೂ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ರಸ್ತೆಯಲ್ಲಿ ವಾಹನಗಳ ಓಡಾಟವೇ ಕಷ್ಟವಾಗಿದೆ.

ಚಳಿಗೆ ಜನರು ಥಂಡಾ ಹೊಡೆದಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಚ್ಚಗಿನ ಬಟ್ಟೆ ಧರಿಸಿಕೊಂಡು ಹೊರ ಬರುತ್ತಿದ್ದಾರೆ. ಶೀತಗಾಳಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜ್ವರ, ಕೆಮ್ಮು, ಶೀತಕ್ಕೆ ಕಾರಣವಾಗುತ್ತಿದೆ. ಆರೋಗ್ಯ ತಪಾಸಣೆಯ ಉದ್ದೇಶದಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ.

ADVERTISEMENT

ಮಕ್ಕಳು ಚಳಿಗೆ ನಡುಗುತ್ತಲೇ ಶಾಲೆ– ಕಾಲೇಜುಗಳಿಗೆ ತೆರಳುತ್ತಿದ್ದ ದೃಶ್ಯಗಳು ನಗರದಲ್ಲಿ ಸೋಮವಾರ ಕಂಡು ಬಂದವು. ನಗರಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಜಾಸ್ತಿ ಇದೆ. ಹಳ್ಳಿ ಜನ ಬೆಳಿಗ್ಗೆ, ಸಂಜೆ ನಂತರ ಬೆಂಕಿ ಕಾಯಿಸುವ ಮೂಲಕ ಚಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ವಾಹನಗಳು ಕಾಣಿಸದಷ್ಟು ಮಂಜು ಆವರಿಸಿಕೊಳ್ಳುತ್ತಿದೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುವ ಸಂಭವ ಹೆಚ್ಚಿದೆ. ಎಚ್ಚರಿಕೆಯಿಂದ ಮುಂದೆ ಸಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.