ADVERTISEMENT

ತೈಲ ಬೆಲೆ ಏರಿಕೆಗೆ ಖಂಡನೆ

ತಿಪಟೂರಿನಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:56 IST
Last Updated 10 ಫೆಬ್ರುವರಿ 2021, 16:56 IST
ತಿಪಟೂರಿನ ಮುಖ್ಯ ರಸ್ತೆಗಳಲ್ಲಿ ತಾಲ್ಲೂಕು ಕಾಂಗ್ರೆಸ್‌ ಘಟಕದಿಂದ ಪ್ರತಿಭಟನೆ ನಡೆಯಿತು
ತಿಪಟೂರಿನ ಮುಖ್ಯ ರಸ್ತೆಗಳಲ್ಲಿ ತಾಲ್ಲೂಕು ಕಾಂಗ್ರೆಸ್‌ ಘಟಕದಿಂದ ಪ್ರತಿಭಟನೆ ನಡೆಯಿತು   

ತಿಪಟೂರು: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲದ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ತಾಲ್ಲೂಕು ಘಟಕದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕೆಂಪಮ್ಮದೇವಿ ದೇಗುಲದ ಮುಂಭಾಗದಿಂದ ದೊಡ್ಡಪೇಟೆಯ ಮಾರ್ಗವಾಗಿ ಸಿಂಗ್ರಿ ನಂಜಪ್ಪ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರಗೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿದ ನೂರಾರು ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ‘ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಕಳೆದ ಒಂದು ವರ್ಷದಲ್ಲಿ ಶೇ 15ರಷ್ಟು ಪೆಟ್ರೋಲ್ ದರ ಹೆಚ್ಚಳವಾಗಿದೆ. ಡೀಸೆಲ್‌ ಬೆಲೆಯೂ ಶೇ14 ರಷ್ಟು ಹೆಚ್ಚಾಗಿದೆ. ಅಡುಗೆ ಅನಿಲದ ಬೆಲೆಯಲ್ಲಿಯೂ ಗಣನೀಯ ಬದಲಾವಣೆ ಕಂಡಿದ್ದೇವೆ. ಕೇಂದ್ರ ಸರ್ಕಾರ ಆಮದು ಆಗುವಂತಹ ತೈಲ ಬೆಲೆಯನ್ನು ಎಲ್ಲಿಯೂ ಮಾಹಿತಿ ನೀಡುತ್ತಿಲ್ಲ. ಜನಸಾಮಾನ್ಯರು ಜೀವನದ ಸ್ಥಿತಿ ಹೇಳತೀರದಂತಹ ಸ್ಥಿತಿ ತಲುಪಿದೆ’ ಎಂದರು.

ADVERTISEMENT

ದೇಶದ ಪ್ರಧಾನಿ ಯಾವ ವಿಚಾರಕ್ಕೆ ವಹಿಸಿಕೊಳ್ಳಬೇಕು ಎನ್ನುವುದು ನಮಗೂ ತಿಳಿದಿದೆ. ಕೇಂದ್ರದ ಕಾಯ್ದೆಗಳ ವಿರುದ್ಧ ಜನರು, ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ, ಅದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ‌ಅಪಹಾಸ್ಯ ಮಾಡುತ್ತಿರುವುದು ಖಂಡನೀಯ. ಮತ ನೀಡುವ ಸಂದರ್ಭದಲ್ಲಿ ರೈತರ ಮನೆ ಬಾಗಿಲಿಗೆ ಬಂದು ಮತ ಕೇಳುವ ಇವರು ರೈತರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ಇವರ ಮೇಲಿದೆ. ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕಿದ್ದು, ಎಲ್ಲ ವಲಯಗಳನ್ನು ಖಾಸಗೀಕರಣ ನೀತಿಯನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರ ಮೇಲೆ ಹೊರೆಯನ್ನು ಹೆಚ್ಚಳ ಮಾಡುತ್ತಿದೆ ಎಂದು ಆರೋಪಿಸಿದರು.

ತಾಲ್ಲೂಕು ಕಾಂಗ್ರೆಸ್ ಘಟಕದಿಂದ ರಾಜ್ಯಪಾಲರಿಗೆ ಅಗತ್ಯವಸ್ತುಗಳ ಬೆಲೆ ಕಡಿಮೆ, ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ ಬೆಲೆ ಕಡಿಮೆ ಮಾಡುವಂತೆ ಮನವಿ ಮಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಕಾಂತರಾಜು, ನಗರ ಘಟಕದ ಅಧ್ಯಕ್ಷ ಟಿ.ಎನ್.ಪ್ರಕಾಶ್, ತಾ.ಪಂ.ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ಉಪಾಧ್ಯಕ್ಷ ಶಂಕರ್.ಎನ್., ಎಂ.ಎನ್.ಸುರೇಶ್, ಸಿದ್ದಾಪುರ ಸುರೇಶ್, ಕೆಪಿಸಿಸಿ ಸದಸ್ಯ ಯೋಗೇಶ್, ಅಲ್ಪ ಸಂಖ್ಯಾತರ ಘಟಕದ ಸೈಫುಲ್ಲಾ, ಎಪಿಎಂಸಿ ಸದಸ್ಯ ಮಧುಸೂಧನ್ ಬೋರ್‍ವೆಲ್, ಬಜಗೂರು ಮಂಜುನಾಥ್, ಕಾಂತರಾಜು, ನಗರಸಭಾ ಸದಸ್ಯರುಗಳಾದ ಮಹೇಶ್, ಮೇಘಶ್ರೀ ಭೂಷಣ್, ವಿನುಥ, ಕಾಂಗ್ರೆಸ್ ಯುವ ಘಟಕದ ನಗರ ಅಧ್ಯಕ್ಷ ಮುಸ್ತಫಾ, ಗ್ರಾಮೀಣ ಘಟಕ ಅಧ್ಯಕ್ಷ ಪ್ರತಾಪ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಶಂಕರ್, ಯುವ ಮುಖಂಡ ಆದರ್ಶ ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.