ADVERTISEMENT

ಗ್ರಾಹಕರಿಗೆ ಕೋಟ್ಯಂತರ ಹಣ ವಂಚನೆ ಪ್ರಕರಣ: ಎಂ.ಡಿ ಸೇರಿ 12 ಜನರಿಗೆ ಜೈಲು ಶಿಕ್ಷೆ

ಮಂಜುನಾಥ್ ಫೈನಾನ್ಸ್ ಕಂಪನಿಯಿಂದ ವಂಚನೆ: ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 14:10 IST
Last Updated 4 ಸೆಪ್ಟೆಂಬರ್ 2018, 14:10 IST
ಕಂಪನಿಯ ಎಂ.ಡಿ ಟಿ.ಎಚ್.ಮಂಜುನಾಥ
ಕಂಪನಿಯ ಎಂ.ಡಿ ಟಿ.ಎಚ್.ಮಂಜುನಾಥ   

ತುಮಕೂರು: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಂಜುನಾಥ ಫೈನಾನ್ಸ್ (ಎಂಎಂಎಸ್) ಕಂಪನಿ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಮಂಜುನಾಥ್ ಸೇರಿದಂತೆ 12 ಮಂದಿ ನಿರ್ದೇಶಕರಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಕಂಪನಿ ನಿರ್ದೇಶಕರಾದ ಕೊರಟಗೆರೆ ತಾಲ್ಲೂಕು ಸೋಂಪುರದ ಎಸ್.ಆರ್.ಶ್ರೀಶೈಲ ಪ್ರಸನ್ನ, ಬಿ.ಸುಶೀಲಮ್ಮ, ಟಿ.ಎಚ್.ಮೋಹನ್ ಕುಮಾರ್, ಕತ್ತಿನಾಗೇನಹಳ್ಳಿ ಕೆ.ಕುಮಾರ್, ಚಿಕ್ಕನಹಳ್ಳಿಯ ಸಿ.ಎನ್.ಲೋಕೇಶ, ಸಿ.ಎನ್.ಪುರುಷೋತ್ತಮ, ತುಮಕೂರು ಮೆಳೇಕೋಟೆಯ ಎಸ್.ರಾಜಣ್ಣ, ಗುಬ್ಬಿ ತಾಲ್ಲೂಕಿನ ಚಿಕ್ಕೋನಹಳ್ಳಿ ಎನ್.ಕೆ.ಸಿದ್ದರಾಜು, ತುಮಕೂರು ಅಶೋಕ ನಗರದ ಟಿ.ಎಂ.ರವಿಶಂಕರ್‌ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ನಗರದಲ್ಲಿ 2003–04ರಲ್ಲಿ ಆರಂಭಗೊಂಡಿದ್ದ ಮಂಜುನಾಥ ಫೈನಾನ್ಸ್, ರಿಯಲ್ ಎಸ್ಟೇಟ್ ಸಂಸ್ಥೆಗಳು 2008ರಲ್ಲಿ ಬಾಗಿಲು ಮುಚ್ಚಿದ್ದವು. ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳ ಸಾವಿರಾರು ಗ್ರಾಹಕರಿಂದ ಹಣ ದ್ವಿಗುಣ ಮಾಡಿಕೊಡುವುದಾಗಿ ಕಂಪನಿಯ ನಿರ್ದೇಶಕರು ಹಣ ಪಡೆದಿದ್ದರು. ಅಸಲು ಮತ್ತು ಬಡ್ಡಿಯನ್ನು ನೀಡದೆ ವಂಚಿಸಿ ಕಂಪನಿಯನ್ನು ಮುಚ್ಚಿದ್ದವು. ಅಂದಾಜು ₹ 30 ಕೋಟಿ ವಂಚನೆ ನಡೆದಿದೆ ಎನ್ನಲಾಗಿದೆ.

ADVERTISEMENT

ಕೊರಟಗೆರೆಯ ಜಿ.ಎನ್.ಮಲ್ಲೇಶಪ್ಪ, ಜಿ.ಎಂ ರುದ್ರಮೂರ್ತಿ ಸೇರಿದಂತೆ ಹಲವರು ವಂಚನೆಗೆ ಒಳಗಾಗಿದ್ದರು. ವಂಚನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಿಲ್ಲಾ ಸೆಷನ್ಸ್ ರ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದರು. ಈಗ ಮತ್ತೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.