ಚಿಕ್ಕನಾಯಕನಹಳ್ಳಿ: ಲಾಕ್ಡೌನ್ ಸಡಿಲಗೊಂಡರೂ ಹಳ್ಳಿಹಳ್ಳಿ ತಿರುಗಿ ವ್ಯಾಪಾರ ಮಾಡುವವರ ಜೀವನಕ್ಕೆ ಕೊರೊನಾ ಹೊಡೆತ ನೀಡಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಲಾಕ್ಡೌನ್ನಿಂದಾಗಿ ವ್ಯಾಪಾರವಿಲ್ಲದೆ ಬಹುತೇಕರು ತತ್ತರಿಸಿದ್ದರು. ಲಾಕ್ಡೌನ್ ಸಡಿಲವಾದ ನಂತರ ಪಟ್ಟಣಗಳಲ್ಲಿ ತಕ್ಕಮಟ್ಟಿನ ವಹಿವಾಟು ನಡೆಯುತ್ತಿದೆ. ಆದರೆ, ಹಳ್ಳಿಗಳಿಗೆ ತೆರಳಿ ವ್ಯಾಪಾರ ಮಾಡುವವರ ಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ.
ಅಲೆಮಾರಿಗಳಿಗೆ ಹೊಡೆತ: ಹೇರ್ಪಿನ್, ಕ್ಲಿಪ್, ಬಳೆ, ಸಣ್ಣಪುಟ್ಟ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಿಅಲೆಮಾರಿಗಳು ಜೀವನದ ದಾರಿ ಕಂಡುಕೊಂಡಿದ್ದರು.
ವಾಹನ ಬಾಡಿಗೆ ಪಡೆದು ಬಟ್ಟೆ, ಬೆಡ್ಶೀಟ್, ಪ್ಲಾಸ್ಟಿಕ್ ಸಾಮಗ್ರಿಗಳು, ಪಾತ್ರೆ ಮಾರುವವರು, ಮಿಕ್ಸಿ, ಟಿ.ವಿ, ಕೊಡೆ ರಿಪೇರಿ ಮಾಡುವವರನ್ನಂತೂ ಜನರು ಗ್ರಾಮದೊಳಗೆ ಬಿಟ್ಟುಕೊಳ್ಳುತ್ತಿಲ್ಲ.
‘ಗ್ರಾಮದೊಳಗೆ ಬರಬೇಡಿ. ನೀವು ಬಂದರೆ ಕೊರೊನಾ ಬರುತ್ತದೆ’ ಎಂದು ಪ್ರವೇಶಕ್ಕೆ ನಿರ್ಬಂಧ ಹೇರುತ್ತಿದ್ದಾರೆ. ಸ್ವಲ್ಪ ಧೈರ್ಯಮಾಡಿ ಒಳ ಹೋದರೂ, ಜನರು ಒಟ್ಟಾಗಿ ಬೈದು ಕಳಿಸುತ್ತಾರೆ’ ಎನ್ನುತ್ತಾರೆ ವ್ಯಾಪಾರಿ ವೆಂಕಟೇಶಯ್ಯ.
ವ್ಯಾಪಾರಸ್ಥರು ಯಾರೇ ಹೋದರೂ ಊರು ಯಾವುದು, ಎಲ್ಲಿಂದ ಬರುತ್ತಿದ್ದಾರೆ ಎಂಬ ಪೂರ್ವಾಪರ ಮಾಹಿತಿ ಪಡೆದು, ಪರಿಚಿತರಿದ್ದರೆ ಮಾತ್ರ ಕೆಲ ಗ್ರಾಮಗಳಿಗೆ ಬಿಟ್ಟುಕೊಳ್ಳುತ್ತಾರೆ. ಅಪರಿಚಿತರು ಬಂದರಂತೂ ಪ್ರವೇಶ ನಿಷಿದ್ಧ.
ವಾಹನಗಳಲ್ಲಿ ಸಾಮಗ್ರಿ ತುಂಬಿಕೊಂಡು ವ್ಯಾಪಾರ ಮಾಡುವವರನ್ನಂತೂ ಗ್ರಾಮಸ್ಥರು ಇಂಚಿಂಚೂ ಅಳೆಯುತ್ತಾರೆ. ಅವರ ವಾಹನದ ನೋಂದಣಿ ಸಂಖ್ಯೆ ಎಲ್ಲಿಯದು ಎಂಬುದರಿಂದ ಹಿಡಿದು, ವಾಹನದ ಮೇಲಿರುವ ದೇವರನ್ನು ಗಮನಿಸಿದ ನಂತರವೇ ಕೆಲವೆಡೆ ಪ್ರವೇಶ ನೀಡಲಾಗುತ್ತಿದೆ.
‘ಯಾವ ಗ್ರಾಮಕ್ಕೆ ಹೋದರೂ ಕೊರೊನಾ ಬರುತ್ತದೆ. ಬರಬೇಡಿ ಎಂದು ಹೇಳುತ್ತಾರೆ. ಹಾಗಾಗಿ, ನಮಗೆ ವ್ಯಾಪಾರಕ್ಕೆ ಹೋಗಲೂ ಸಮಸ್ಯೆಯಾಗಿದೆ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ’ ಎನ್ನುತ್ತಾರೆ ಅಲೆಮಾರಿಗಳ ಸುಡುಗಾಡು ಸಿದ್ಧರ ಲಕ್ಷ್ಮಿದೇವಮ್ಮ.
ಹಳ್ಳಿಗಳಿಗೆ ತೆರಳಿ ವ್ಯಾಪಾರ ಮಾಡುವವರಲ್ಲಿ ದಕ್ಕಲಿಗರು, ದೊಂಬಿದಾಸರು, ಸುಡುಗಾಡು ಸಿದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.