ಚಿಕ್ಕನಾಯಕನಹಳ್ಳಿ: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಟ್ಟರೆ ಜೀವನದಲ್ಲಿ ಸ್ವಾವಲಂಬಿ ಬದುಕು ಎನಿಸಿಕೊಳ್ಳುವುದಿಲ್ಲ. ಉತ್ತಮ ಶಿಕ್ಷಣ ಕೊಡಿಸಿದರಷ್ಟೇ ಸ್ವಾಭಿಮಾನದ ಬದುಕು ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಸಂಘದಿಂದ ಆಯೋಜಿಸಿದ್ದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ದುಬಾರಿಯಾಗಿದ್ದು ಎಂಬಿಬಿಎಸ್ ಓದಿಸಲು ಸುಮಾರು ₹2ಕೋಟಿ, ಎಂಜಿನಿಯರಿಂಗ್ ಓದಿಸಲು ಕನಿಷ್ಠ ₹10ರಿಂದ ₹15ಲಕ್ಷ ಖರ್ಚು ಬರುತ್ತಿದೆ. ಸಮಾಜದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಮುಂದುವರೆದ ಸಮಾಜ ಎನಿಸಿಕೊಂಡರು ತೋಟ, ಹೊಲ ನೆಚ್ಚಿಕೊಂಡು ಹಿಂದುಳಿದ ಸಮುದಾಯವಾಗಿದೆ ಎಂದರು.
ಕೊಬ್ಬರಿ ದರ ₹30 ಸಾವಿರ ತಲುಪಿದರೂ ದಾಸ್ತಾನು ಉಳಿಸಿಕೊಂಡ ವರ್ತಕರಿಗೆ ಲಾಭವಾಗಿದೆ ಹೊರತು ತೆಂಗು ಬೆಳೆಗಾರರಿಗೆ ಬೆಲೆ ಸಿಕ್ಕಿಲ್ಲ ಎಂದರು.
ಮಕ್ಕಳ ಶಿಕ್ಷಣ ಬದುಕಿಗೆ ಒತ್ತು ನೀಡದೆ ಆಸ್ತಿ ಮಾಡಲು ಮುಂದಾದಾಗ ಬಂಡವಾಳ ಆಸ್ತಿ ಮೇಲೆರುತ್ತದೆ. ಶಿಕ್ಷಣಕ್ಕೆ ಹಣದ ಕೊರತೆ ಉಂಟಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಪಿ.ಷಡಾಕ್ಷರಿಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಲೇಖನ, ರಾಜಕೀಯ, ಆರ್ಥಿಕತೆ ಮತ್ತು ದಿನದ ವಿದ್ಯಮಾನಗಳ ಮಾಹಿತಿ ದೊರಕುತ್ತದೆ. ಇದರಿಂದ ಪ್ರಾಪಂಚಿಕ ಜ್ಞಾನ ಬೆಳೆಯುತ್ತದೆ ಎಂದರು.
ಹಂಪಿ ವಿಶ್ವವಿದ್ಯಾಲಯದ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ಶಿಕ್ಷಣ ಸ್ಪರ್ಧಾತ್ಮಕವಾಗಿದೆ. ಸ್ವ ಬೆಳವಣಿಗೆಯಿಂದ ಸಮಾಜದ ಬೆಳವಣಿಗೆವರೆಗೆ ಆಸಕ್ತಿ ವಹಿಸಿದರೆ ಮಕ್ಕಳು ಸಾಧಕರಾಗುತ್ತಾರೆ ಎಂದರು.
ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಕುಪ್ಪೂರು ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಮಾತನಾಡಿದರು.
ಕುಪ್ಪುರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯ, ತುಮುಲ್ ನಿರ್ದೇಶಕ ಬಿ.ಎನ್.ಶಿವಪ್ರಕಾಶ್, ರವಿ ಶ್ಯಾಮಿಯಾನ, ಹೊನ್ನೇಬಾಗಿ ಬಸವರಾಜು, ಎನ್.ಶ್ರೀಧರ್, ಸಿ.ಮಲ್ಲಿಕಾರ್ಜುನಸ್ವಾಮಿ, ಅನುಪಮ ನಾಗರಾಜು, ಬೆಸ್ಕಾಂ ಸ್ವಾಮಿ, ಮೇಲನಹಳ್ಳಿ ಗಂಗಾಧರ್, ಮರುಳಸಿದ್ದಯ್ಯ, ರಾಜಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.