ತುಮಕೂರು: ತಾಲ್ಲೂಕಿನ ಗೇರಹಳ್ಳಿಯ ಶೆಡ್ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೆ.16ರಂದು ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಸಿಪಿಐ ಜಿ.ಕೆ.ಮಧುಸೂದನ್ ನೇತೃತ್ವದ ತಂಡ ಶೆಡ್ ಮೇಲೆ ದಾಳಿ ನಡೆಸಿ 227 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿತ್ತು.
ಪ್ರಕರಣ ಸಂಬಂಧ ಬೆಂಗಳೂರಿನ ಕೆ.ಎನ್.ಶ್ರೀನಿವಾಸ ಹಾಗೂ ಅನ್ಬು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀನಿವಾಸ್ ಚಿಕ್ಕಗುಂಡಗಲ್ ಗ್ರಾಮದ ಬಳಿ ಕುಮಾರಸ್ವಾಮಿ ಎಂಬುವವರಿಗೆ ಸೇರಿದ ಕೇಸರಿ ನಂದನ್ ರೈಸ್ಮಿಲ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 212 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಹಾಗೂ ಡಿವೈಎಸ್ಪಿ ಎಚ್.ಜೆ.ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಸಿಪಿಐ ಮಧುಸೂದನ, ಪಿಎಸ್ಐ ಪಿ.ಎನ್.ಶೇಷಾದ್ರಿ, ಎ.ಎಸ್.ಐ ಬಾಲಕುಮಾರ, ಸಿ.ಎಸ್.ಪ್ರಸನ್ನಕುಮಾರ್, ಶಾಂತಕುಮಾರ್, ತಿಪ್ಪೇಸ್ವಾಮಿ ಮತ್ತು ರವಿಕುಮಾರ್ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.