ADVERTISEMENT

ರಸ್ತೆಗಾಗಿ ಸಂಘರ್ಷ; ವೃದ್ಧೆ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 17:04 IST
Last Updated 6 ಏಪ್ರಿಲ್ 2020, 17:04 IST

ಕುಣಿಗಲ್: ರಾಯಗೋನಹಳ್ಳಿ ಗ್ರಾಮದ ರಸ್ತೆ ವಿವಾದದ ಸಂಘರ್ಷ ವೃದ್ಧೆಲಕ್ಷ್ಮಮ್ಮ (60) ಎಂಬುವವರ ಬಲಿ ಪಡೆದಿದೆ.

ಎರಡು ವರ್ಷದಿಂದ ಗ್ರಾಮದ ರಸ್ತೆ ನಿರ್ಮಾಣದ ವಿಚಾರದಲ್ಲಿ ಲಕ್ಷ್ಮಮ್ಮ ಮತ್ತು ಕೃಷ್ಣಪ್ಪ ಅವರ ಕುಟುಂಬದ ನಡುವೆ ವಾದವಿವಾದಗಳು ನಡೆಯುತ್ತಿದ್ದವು. ಪ್ರಕರಣ ಪೊಲೀಸ್ ಠಾಣೆ ಮತ್ತು ನ್ಯಾಯಾಲದ ಮೆಟ್ಟಿಲೇರಿತ್ತು.

ರಸ್ತೆಯ ಕಾಮಗಾರಿ ಅಪೂರ್ಣವಾಗಿದ್ದು, ಲಕ್ಷ್ಮಮ್ಮ ಭಾನುವಾರ ಸಂಬಂಧಿಯ ಅಂತ್ಯಕ್ರಿಯೆಗಾಗಿ ಊರಿಗೆ ಹೋಗಿದ್ದಾಗ, ಕೃಷ್ಣಪ್ಪ ಮತ್ತು ಕುಟುಂಬವರ್ಗದವರು ಸೋಮುವಾರ ಬೆಳಿಗ್ಗೆ ಜೆಸಿಪಿ ಬಳಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯತ್ನಿಸಿದರು. ಈ ಸಮಯದಲ್ಲಿ ಲಕ್ಷ್ಮಮ್ಮ ಅವರ ಮಗ ರಂಗಸ್ವಾಮಿ, ಮಗಳು ನರಸಮ್ಮ ತಡೆಯಲು ಯತ್ನಿಸಿದಾಗ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನೆಡೆಯಿತು.

ADVERTISEMENT

ಅಂತ್ಯಕ್ರಿಯೆ ಮುಗಿಸಿ ಬಂದ ಲಕ್ಷ್ಮಮ್ಮ ಸಹ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದಾಗ ಕೃಷ್ಣಪ್ಪ ಅವರ ಗುಂಪು ದೊಣ್ಣೆಗಳಿಂದ ಹಲ್ಲೆ ನಡೆಸಿತು. ಲಕ್ಷ್ಮಮ್ಮ ಮತ್ತು ರಂಗಸ್ವಾಮಿ ತಲೆಗೆ ತೀವ್ರಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ಷ್ಮಮ್ಮ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಪ್ಪ ಅವರು ಸಾಕಿದ ನಾಯಿಗಳು ದಾಳಿ ನಡೆಸಿದ ಸಮಯದಲ್ಲಿ ಲಕ್ಷ್ಮಮ್ಮನ ಮಗಳು ನರಸಮ್ಮ ಅವರಿಗೂ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪೊಲೀಸರು ಕೃಷ್ಣಪ್ಪ ಮತ್ತು ಕುಟುಂಬದವರ ಬಂಧನಕ್ಕೆ ತೀವ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.