ತುಮಕೂರು: ತೋಟಗಾರಿಕಾ ಇಲಾಖೆ, ಹಾಪ್ಕಾಮ್ಸ್ ಮತ್ತು ‘ಹನಿಮಿತ್ರ’ ಸಂಸ್ಥೆ ಸಹಯೋಗದಲ್ಲಿ ರೈತರಿಂದ ನೇರವಾಗಿ ಖರೀದಿಸಿದ ತರಕಾರಿ ಮತ್ತು ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ನಗರದ ಜಿಲ್ಲಾ ತೋಟಗಾರಿಕಾ ಕಚೇರಿ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ‘ಜನಸಾಮಾನ್ಯರು ತರಕಾರಿ, ಹಣ್ಣು ಖರೀದಿಗೆ ಮಾರುಕಟ್ಟೆಗೆ ಬರಬೇಕು. ಇದನ್ನು ತಪ್ಪಿಸುವ ಸಲುವಾಗಿ ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
ಹಾಪ್ಕಾಮ್ಸ್ ಮತ್ತು ಹನಿ ಮಿತ್ರ ತಂಡದವರು ಕೈಜೋಡಿಸಿದ್ದಾರೆ. ಪ್ರತಿದಿನ ಒಂದೊಂದು ವಾರ್ಡ್ಗೆ ತೆರಳಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಹನಿ ಮಿತ್ರ ತಂಡದ ಎಚ್.ಪಿ.ನೀಲೇಶ್, ‘ಸ್ನೇಹಿತರೆಲ್ಲಾ ಜತೆಗೂಡಿ ಹನಿ ಸೇವೆಯೇ ಜೀವನ ಎಂಬ ಎನ್ಜಿಒ ಮೂಲಕ ನಗರದ 35 ವಾರ್ಡ್ಗಳಲ್ಲೂ ಮನೆ ಮನೆಗೆ ತರಕಾರಿ ತಲುಪಿಸುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇವೆ. ರೈತರಿಂದ ಖರೀದಿಸಿದ ತರಕಾರಿಯನ್ನು 25 ವಾಹನಗಳಲ್ಲಿ ತಲುಪಿಸಲಾಗುತ್ತಿದೆ’ ಎಂದರು.
ಹಾಪ್ಕಾಮ್ಸ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್, ಹನಿಮಿತ್ರ ತಂಡದ ಹರೀಶ್, ಆಕಾಶ್, ಗುರುಪ್ರಸಾದ್ ಇದ್ದರು.
ಸಹಾಯವಾಣಿ 0816–2970310, 0816–2275189ಗೆ ಕರೆಮಾಡಿ ಮಾಹಿತಿ ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.