ADVERTISEMENT

ದೇವರಾಜ ಅರಸುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು: ಸಿ.ಡಿ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 12:52 IST
Last Updated 22 ಆಗಸ್ಟ್ 2023, 12:52 IST
ಚಿಕ್ಕನಾಯಕನಹಳ್ಳಿಯ ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು
ಚಿಕ್ಕನಾಯಕನಹಳ್ಳಿಯ ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು   

ಚಿಕ್ಕನಾಯಕನಹಳ್ಳಿ: ‘ಕರ್ನಾಟಕ ರಾಜ್ಯ ಎಂದು ಹೆಸರಾಗಿ 50 ವರ್ಷ ಪೂರೈಸುತ್ತಿರುವ ಈ ಹೊತ್ತಿನಲ್ಲಿ ನಾಡಿಗೆ ಹೆಸರನ್ನಿಟ್ಟ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್‌ ಒತ್ತಾಯಿಸಿದರು.

ಪಟ್ಟಣದ ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

‘ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತರುವ ಮೂಲಕ ಭೂ ರಹಿತರಿಗೆ, ಗೇಣಿದಾರರಿಗೆ ಅರಸು ಭೂಮಿ ದೊರಕಿಸಿಕೊಟ್ಟರು. ಆದರೆ 54 ಎಕರೆ ಮಾತ್ರ ಭೂ ಮಾಲಿಕತ್ವ ಹೊಂದಲು ಅವಕಾಶ ಇದ್ದ ನಿಯಮ ಮುರಿದ ಹಿಂದಿನ ಬಿಜೆಪಿ ಸರ್ಕಾರ 250 ಎಕರೆವರೆಗೂ ಅವಕಾಶ ಮಾಡಿಕೊಟ್ಟು ಮತ್ತೆ ಭೂಮಿ ಶ್ರೀಮಂತರ ಕೈ ವಶವಾಗುವಂತೆ ಮಾಡಿ ಅರಸು ಅವರ ಆಶಯಕ್ಕೆ ಧಕ್ಕೆ ತಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಋಣಮುಕ್ತ ಕಾಯ್ದೆ, ಜೀತ ಪದ್ಧತಿ ನಿರ್ಮೂಲನೆ, ಮಲಹೊರುವ ಪದ್ಧತಿ ನಿಷೇಧ, ದಲಿತ, ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ದೇಶದಲ್ಲಿ ಮೊದಲ ಬಾರಿಗೆ ಹಾಸ್ಟೆಲ್‌ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಬಡವರು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.

ಶಾಲೆ ಕಾರ್ಯದರ್ಶಿ ಗೋ.ನಿ. ವಸಂತಕುಮಾರ್‌ ಮಾತನಾಡಿ, ದೇವರಾಜ ಅರಸು ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವಂತೆ ಮಾಡಿದ ಶ್ರೇಷ್ಠ ಸಮಾಜ ಸುಧಾರಕ. ಅಂಬೇಡ್ಕರ್‌ ಆಶಯಗಳನ್ನು ಅಧಿಕಾರ ರಾಜಕಾರಣದ ಮೂಲಕ ಅನುಷ್ಠಾನಕ್ಕೆ ತಂದರು ಎಂದು ಹೇಳಿದರು.

ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಂಗನಾಥ್‌, ಅರಸು ಸಂಘದ ಅಧ್ಯಕ್ಷ ನಾಗರಾಜ ಅರಸು ಮಾತನಾಡಿದರು. ರಂಗ ಕಲಾವಿದ ಪುಟ್ಟಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.