ADVERTISEMENT

ಸ್ಥಳೀಯರಿಗೆ ಟಿಕೆಟ್ ನೀಡಲು ಆಗ್ರಹ: ಕಾಂಗ್ರೆಸ್‌ ಮುಖಂಡರು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 15:55 IST
Last Updated 31 ಜನವರಿ 2023, 15:55 IST

ತುಮಕೂರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡರು ಮಂಗಳವಾರ ಆಗ್ರಹಿಸಿದರು.

ಮುಖಂಡರಾದ ವೈ.ಸಿ.ಸಿದ್ದರಾಮಯ್ಯ, ಪ್ರವರ್ಗ–1 ಜಾತಿಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರೇಣುಕಯ್ಯ ಉಪ್ಪಾರ, ಡಾ.ಪರಮೇಶ್ವರಪ್ಪ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ‘ನಮ್ಮ ಮೂರು ಜನರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಬೇಕು. ಯಾವುದೇ ಕಾರಣಕ್ಕೂ ವಲಸಿಗರಿಗೆ ಮಣೆ ಹಾಕಬಾರದು. ನಾಳೆಯಿಂದಲೇ ವಲಸಿಗರ ವಿರುದ್ಧ ಗೋ ಬ್ಯಾಕ್‌ ಅಭಿಯಾನ ಮಾಡಲಾಗುವುದು’ ಎಂದು ಎಚ್ಚರಿಸಿದರು.

ವಿಧಾನಸಭಾ ಕ್ಷೇತ್ರಕ್ಕೆ ಒಂಬತ್ತು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೊರಗಿನವರಾದ ಧನಂಜಯ, ಜಗದೀಶ್, ವನಿತಾ, ವಿಜಯ ರಾಘವೇಂದ್ರ, ನಟರಾಜ್ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ. ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದ ಲಕ್ಕಪ್ಪ ಅವರೂ ಟಿಕೆಟ್ ಕೇಳಿದ್ದಾರೆ. ಸ್ಥಳೀಯರಿಗೆ ಅವಕಾಶ ನೀಡಿದರೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಇದು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ADVERTISEMENT

ಕಾಂಗ್ರೆಸ್‌ನಲ್ಲಿ ದುಡಿದವರಿಗೆ ಆದ್ಯತೆ ನೀಡಬೇಕು. 2008ರಿಂದಲೂ ಪಕ್ಷದ ಆಕಾಂಕ್ಷಿಯಾಗಿದ್ದೇನೆ. ಚಿಕ್ಕನಾಯಕನಹಳ್ಳಿಯಲ್ಲಿ ಅಹಿಂದ ಮತಗಳು ಹೆಚ್ಚಿದ್ದು, ತಳ ಸಮುದಾಯಗಳಿಗೆ ಅವಕಾಶ ನೀಡಬೇಕು ಎಂದು ವೈ.ಸಿ.ಸಿದ್ದರಾಮಯ್ಯ ಒತ್ತಾಯಿಸಿದರು.

‘ಕಾಂಗ್ರೆಸ್ ಸದೃಢವಾಗಿದ್ದು, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿದರೆ ಗೆಲುವು‌ ನಿಶ್ಚಿತ. ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ಎದುರಾಳಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಯುವುದು ಸೂಕ್ತವಲ್ಲ. ಮಾಧುಸ್ವಾಮಿ ಸೋಲಿಸಲು ನಾನೇ ಸಾಕು ಎಂದು ಸವಾಲು’ ಹಾಕಿದರು.

ಎಲ್ಲೆಡೆ ಕಾಂಗ್ರೆಸ್ ಅಲೆ ಶುರುವಾಗಿದೆ. ಈ ಹಿಂದೆ ಸ್ಪರ್ಧಿಸಿ, ಸೋಲು ಅನುಭವಿಸಿದ ಸಾಸಲು ಸತೀಶ್ ಅವರಿಗೆ ಟಿಕೆಟ್ ನೀಡಿದರೆ ಕೆಲಸ ಮಾಡುತ್ತೇವೆ ಎಂದೂ ಹೇಳಿದರು.

ಮುಖಂಡರಾದ ಪ್ರಸನ್ನಕುಮಾರ್, ಸಿದ್ದಿಕ್, ಜುಬೇದ್, ಮಂಜುನಾಥ್, ದಯಾನಂದ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.