ಕುಣಿಗಲ್: ಸರ್ಕಾರಿ ಗೋಮಾಳ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಲಾಗಿದ್ದ ಎರಡು ಎಕರೆ ನೀಲಗಿರಿ ಮರಗಳನ್ನು ನಾಶ ಮಾಡಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯೆಯ ಪತಿಯ ವಿರುದ್ಧ ವಲಯ ಅರಣ್ಯಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸದಸ್ಯೆ ಷರೀಫಾಬಿ ಪತಿ ಮೊಹಮ್ಮದ್ ಸೆಮ್ಮಿವುಲ್ಲ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಕಿತ್ತಾನಾಮಂಗಲ ಸರ್ವೇ ನಂ. 78ರ ಗೋಮಾಳದಲ್ಲಿ 1998ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನೀಲಗಿರಿ ಸಸಿಗಳನ್ನು ಬೆಳೆಸಲಾಗಿತ್ತು. ಈ ಭಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸುಮಾರು 200 ನೀಲಗಿರಿ ಮರಗಳನ್ನು ಮೊಹಮ್ಮದ್ ಸೆಮ್ಮಿವುಲ್ಲಾ ಜೆಸಿಬಿ ಬಳಸಿ ಕೆಡವಿ ಜಮೀನು ಸಮತಟ್ಟು ಮಾಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಬೆಳೆದು ನಿಂತ ಮರಗಳನ್ನು ಕಡಿದ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರಾದ ಮೋಹನ್, ಬಾಬು ಮತ್ತು ಕೆ.ಎಚ್. ಎನ್.ಗೌಡ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.