ADVERTISEMENT

ಮಹಿಳೆ ಕೊಂದಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 10:54 IST
Last Updated 31 ಆಗಸ್ಟ್ 2020, 10:54 IST
ಕೊಲೆಗೈದ 5 ಮಂದಿ ದುಷ್ಕರ್ಮಿಗಳನ್ನು ಬಂಧಿಸಿರುವ ತುಮಕೂರು ಪೊಲೀಸರು
ಕೊಲೆಗೈದ 5 ಮಂದಿ ದುಷ್ಕರ್ಮಿಗಳನ್ನು ಬಂಧಿಸಿರುವ ತುಮಕೂರು ಪೊಲೀಸರು   

ತುಮಕೂರು: ಮಹಿಳೆಯನ್ನು ಕೊಲೆಗೈದ 5 ಮಂದಿ ದುಷ್ಕರ್ಮಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ನಗರದ ಮರಳೇನಹಳ್ಳಿ ರಸ್ತೆಯ ಡಿ.ಎಂ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅಂಜಲಿ(23) ಎಂಬ ಮಹಿಳೆಯನ್ನು ಆ.21 ರಂದು ರಾತ್ರಿ ಸುಮಾರು 11 ಗಂಟೆಗೆ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಸಂಬಂಧ ಮನೆಯ ಮಾಲೀಕ ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಅವರ ನಿರ್ದೇಶನ ಹಾಗೂ ಡಿವೈಎಸ್‌ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ತುಮಕೂರು ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಬಿ.ನವೀನ ಉಸ್ತುವಾರಿಯಲ್ಲಿ ತಂಡ ರಚಿಸಲಾಗಿತ್ತು. ನಗರ ಪೊಲೀಸ್ ಠಾಣೆಯ ಪಿಎಸ್ಐ‌ ಮಂಜುನಾಥ್, ಎಎಸ್‌ಐ ರಮೇಶ್ ಮತ್ತು ಸಿಬ್ಬಂದಿ ಮಂಜುನಾಥ, ನಾಗರಾಜ, ಪ್ರಸನ್ನಕುಮಾರ್, ಜಗದೀಶ್, ಈರಣ್ಣ, ಸೈಯದ್ ಮುಕ್ತಿಯಾರ್, ರಾಮಚಂದ್ರಯ್ಯ, ನವೀನ್‌ಕುಮಾರ್, ಜೈಪ್ರಕಾಶ್, ಸಿದ್ದೇಶ್ವರ, ದೇವರಾಜ, ‌ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್, ನರಸಿಂಹರಾಜು ಅವರು ಆ.30 ರಂದು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ADVERTISEMENT

ತುಮಕೂರು ನಗರ ಬೋವಿಪಾಳ್ಯ ಜೈಲ್‌ ರಸ್ತೆಯ ನಿವಾಸಿ ಮಾರುತಿ(25), ಯಲ್ಲಾಪುರದ ಧನರಾಜ್‌‌ ನಾಯ್ಕ(22), ತಿಮ್ಮಲಾಪುರದ ಮನು(22), ಧನು(21), ಕೊರಟಗೆರೆ ತಾಲ್ಲೂಕು ಬರಕ ಗ್ರಾಮದ ರಾಜೇಶ(22) ಬಂಧಿತರು.

ಹಣದ ಆಸೆಗಾಗಿ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಕಬ್ಬಿಣದ 2 ರಾಡುಗಳು, 7 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.