ತುರುವೇಕೆರೆ: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಮ ಮಂದಿರ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆಗಳು ಜರುಗಿದವು.
ಕೊಡಗೀಹಳ್ಳಿ ಆಂಜನೇಯ ಮತ್ತು ಪಟ್ಟಣದ ಎಸ್ಎಸಿ ಮಯೂರ ಕಾನ್ವೆಂಟ್ ಪಕ್ಕದ ಸೀತಾರಾಮ ಲಕ್ಷ್ಮಣ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವಿಶೇಷ ದ್ವಾರ ನಿರ್ಮಿಸಲಾಗಿತ್ತು.
ಈ ದೇವಾಲಯಗಳಲ್ಲಿ ಬೆಳಿಗ್ಗಿನಿಂದಲೇ ದೇವರಿಗೆ ಪಂಚಾಭಿಷೇಕ ಮಾಡಿ ನಂತರ ಎಳನೀರಿನಿಂದ ತೊಳೆದು ಬಗೆ ಬಗೆಯ ವಸ್ತ್ರಗಳು ಹಾಗೂ ವೈವಿಧ್ಯಮಯ ಹೂ ಮಾಲೆಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದ ಗೋಪುರಗಳು ವಿದ್ಯುತ್ ದೀಪಗಳಿಂದ ಜಗಮಗಿಸಿದವು. ದೇವಾಲಯದ ದ್ವಾರಗಳಲ್ಲಿ ಬಾಳೆ ಕಂದು ಕಟ್ಟಿ, ತಳಿರು ತೋರಣಗಳಿಂದ ಅಲಂಕಾರಗೊಳಿಸಿದ್ದರು. ಗ್ರಾಮದ ಮಹಿಳೆಯರು, ಪುರುಷರಾಧಿಯಾಗಿ ತಂಡೋಪತಂಡವಾಗಿ ದೇವಾಲಯಕ್ಕೆ ತೆರಳಿ ಹಣ್ಣು, ಕಾಯಿ ಪೂಜೆ ಸಲ್ಲಿಸಿ ಪುನೀತರಾದರು.
ದೇವಾಲಯಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ, ಲಘು ಪ್ರಸಾದ ವ್ಯವಸ್ಥೆ
ಮಾಡಲಾಗಿತ್ತು.
ಇದೇ ರೀತಿ ತಾಲ್ಲೂಕಿನ ಹಾವಾಳದ ಗೊಂದಿ ಆಂಜನೇಯ, ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ರಾಮಾಂಜನೇಯ, ಗೊಟ್ಟಿಕೆರೆ, ಪುರ, ರಾಮಡಿಹಳ್ಳಿ, ಸಂಪಿಗೆ, ಮುನಿಯೂರಿನ ರಾಮ ಆಂಜನೇಯ ಸ್ವಾಮಿ, ದಂಡಿನಶಿವರ ಸೇರಿದಂತೆ ತಾಲ್ಲೂಕಿನ ರಾಮ ಮಂದಿರಗಳಲ್ಲಿ ವಿಶೇಷ ಪೂಜಾ ಕಾರ್ಯ ಜರುಗಿದವು. ನೆರೆದಿದ್ದ ಭಕ್ತರಿಂದ ಶ್ರೀರಾಮ ಮತ್ತು ಆಂಜನೇಯ ಸ್ವಾಮಿಯ ಜಯಘೋಷ ಮೊಳಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.