ADVERTISEMENT

ಪಾಳುಬಿದ್ದಿರುವ ಆರೋಗ್ಯ ಕೇಂದ್ರ: ಸಾರ್ವಜನಿಕರ ಆಕ್ರೋಶ

30 ವರ್ಷಗಳಿಂದ ಕಟ್ಟಡಕ್ಕಿಲ್ಲ ಮುಕ್ತಿ: ಸಾರ್ವಜನಿಕರ ಆಕ್ರೋಶ

ಗಂಗಾಧರ್ ವಿ ರೆಡ್ಡಿಹಳ್ಳಿ
Published 10 ಫೆಬ್ರುವರಿ 2021, 4:29 IST
Last Updated 10 ಫೆಬ್ರುವರಿ 2021, 4:29 IST
ಬಂದ್ರೇಹಳ್ಳಿಯಲ್ಲಿ ಪಾಳುಬಿದ್ದ ಪ್ರಾಥಮಿಕ ಆರೋಗ್ಯ ಉಪಕೇಂದ್ರ
ಬಂದ್ರೇಹಳ್ಳಿಯಲ್ಲಿ ಪಾಳುಬಿದ್ದ ಪ್ರಾಥಮಿಕ ಆರೋಗ್ಯ ಉಪಕೇಂದ್ರ   

ಕೊಡಿಗೇನಹಳ್ಳಿ: ಆರೋಗ್ಯ ಹದಗೆಟ್ಟಾಗ ಹತ್ತಾರು ಗ್ರಾಮಗಳ ಜನರು ಸದಾ ಎಡತಾಕುತ್ತಿದ್ದಬಂದ್ರೇಹಳ್ಳಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ 30 ವರ್ಷಗಳಿಂದ ಪಾಳು ಬಿದ್ದಿದೆ. ಈ ಭಾಗದ ಜನರು ಖಾಯಿಲೆ ಬಂದಾಗ ಮಧುಗಿರಿಗೆ ತೆರಳುವುದು ಅನಿವಾರ್ಯವಾಗಿದೆ.

ಕಸಬಾ ಹೋಬಳಿಯ ಬಂದ್ರೇಹಳ್ಳಿಯಲ್ಲಿ ಸುಮಾರು 300 ಮನೆಗಳಿವೆ. ಹತ್ತಾರು ಗ್ರಾಮಗಳಿಂದ ಸುತ್ತುವರೆದಿದೆ. ಸಮೀಪದ ಗೋಪಗಾನಹಳ್ಳಿ, ವೆಂಕಟಾಪುರ, ಕಲ್ಲೇನಹಳ್ಳಿ, ತವಕದಹಳ್ಳಿ, ಭಕ್ತರಹಳ್ಳಿ, ಸೋಂಪುರ, ಶಾಸರಪಾಳ್ಯ, ರಂಗನಾಥಪುರ, ಮುದ್ದೇನಹಳ್ಳಿ, ದಾಸರಪಾಳ್ಯ, ನೇರಳೆಕೆರೆ ಹಾಗೂ ಯರಗುಂಟೆಗಳಿಗೆ ಕೂಡ ಈ ಗ್ರಾಮ ಕೇಂದ್ರಸ್ಥಾನವಾಗಿದೆ. ಆದರೆ ಈ ಎಲ್ಲ ಗ್ರಾಮಸ್ಥರೂ ಈಗ ಸಣ್ಣ-ಪುಟ್ಟ ಖಾಯಿಲೆ ಬಂದರೆ ಮಧುಗಿರಿಗೆ ತೆರಳುವಂತಾಗಿದೆ.

50 ವರ್ಷಗಳ ಹಿಂದೆ ಬಂದ್ರೇಹಳ್ಳಿಯಲ್ಲಿ ನೂತನ ಕಟ್ಟಡ ನಿರ್ಮಿಸಿ ವೈದ್ಯರನ್ನು ನೇಮಿಸಲಾಗಿತ್ತು. ಈ ಗ್ರಾಮದವರಲ್ಲದೇ, ಸುತ್ತಲಿನ ಗ್ರಾಮಗಳಿಂದ ರೋಗಿಗಳು ಬಂದುಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದರು. ನಂತರ ಬಂದ್ರೇಹಳ್ಳಿ ಗ್ರಾಮಕ್ಕೆ ಸಿಗಬೇಕಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಮರುವೇಕೆರೆ ಗ್ರಾಮದ ಪಾಲಾಗಿದ್ದರಿಂದ ವೈದ್ಯರಲ್ಲದೇ ನರ್ಸ್ ಕೂಡ ಇಲ್ಲಿಗೆ ಬರದಂತಾಯಿತು. ಈ ಭಾಗದ ಜನರು ಮರುವೇಕೆರೆಗೆ ತೆರಳಲು ಬಸ್‌ ಸೌಕರ್ಯವಿಲ್ಲ. ಸಕಾಲಕ್ಕೆ ವೈದ್ಯರು ಸಿಗದ ಕಾರಣ ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ಸಮಸ್ಯೆ ಬಗೆಹರಿಸಲು ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು, ಜಿಲ್ಲಾ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಗಮನಹರಿಸಿ ಶಿಥಿಲಗೊಂಡಿರುವ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಿ, ವೈದ್ಯರನ್ನು ನೇಮಿಸಬೇಕು. ಇಲ್ಲವೇ ಗ್ರಾಮ ಪಂಚಾಯಿತಿಗಾದರೂ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಣ್ಣ, ರಂಗಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಸೋಂಪುರ ಭವ್ಯಕೇಶವಮೂರ್ತಿ, ಮುಖಂಡರಾದ ಬಸವರಾಜು, ಸುನೀಲ್, ಮಲ್ಲಣ್ಣ, ನಾಗೇಂದ್ರಪ್ಪ, ರವಿಕುಮಾರ್, ರಂಗನಾಥ್, ಕಾರ್ತಿಕ್ ಕುಮಾರ್, ದೇವರಾಜ್, ಅಂಜಿ, ಗಂಗಣ್ಣ, ಹನುಮಂತರಾಯಪ್ಪ, ಚಿಕ್ಕಹನುಮಂತರಾಯಪ್ಪ, ಬಡಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.