ADVERTISEMENT

ವೈಕಲ್ಯ ಮರೆಸುವ ಚಿತ್ರಗಳು...

ಮಲಗಿದಲ್ಲಿಯೇ ಚಿತ್ರ ಬಿಡಿಸುವ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:37 IST
Last Updated 3 ಡಿಸೆಂಬರ್ 2020, 14:37 IST
ರವಿಕುಮಾರ್ ಕೈಯಲ್ಲಿ ಅರಳಿದ ಶಿವಾಜಿ
ರವಿಕುಮಾರ್ ಕೈಯಲ್ಲಿ ಅರಳಿದ ಶಿವಾಜಿ   

ತುರುವೇಕೆರೆ: ಸಾಧಿಸುವ ಛಲ ಮತ್ತು ಗುರಿ ಮುಟ್ಟುವ ಸಂಕಲ್ಪ ಇದ್ದರೆ ಎಂತಹ ಅಂಗವೈಕಲ್ಯವೂ ಸಾಧನೆಗೆ ಅಡ್ಡಿಪಡಿಯಾಗದು ಎಂಬುದನ್ನು ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿಗೇಟ್‌ನ ಅಂಗವಿಕಲ ಬಾಲಕ ರವಿಕುಮಾರ್‍ ತೋರಿಸಿಕೊಟ್ಟಿದ್ದಾರೆ.

ನೂರಾರು ಮಾದರಿಯ ಚಿತ್ರಗಳು ಈ ಬಾಲಕನ ಕೈಯಲ್ಲಿ ಅರಳಿವೆ. ರವಿಕುಮಾರ್‍ ತಂದೆ ರಮೇಶ್‍ರಾವ್‍ ಶಿಳ್ಳೇಕ್ಯಾತ ಜನಾಂಗಕ್ಕೆ ಸೇರಿದವರಾಗಿದ್ದಾರೆ. ತಮ್ಮ ಇಬ್ಬರು ಅಂಗವಿಕಲ ಮಕ್ಕಳನ್ನು ಕೂಲಿ ಮಾಡಿ ಸಾಕುವುದೇ ಒಂದು ಕಾಯಕ. ಅವರ ಮೊದಲನೆಯ ಮಗ ರವಿಕುಮಾರ್‍.

ಈ ಬಾಲಕ ಹುಟ್ಟುವಾಗಲೇ ಅಂಗವಿಕಲ. ಕೂತಲ್ಲೇ ಎಲ್ಲ ಕ್ರಿಯೆಗಳು ನಡೆಯಬೇಕು. ಎಲ್ಲಾದರೂ ಹೊರಗೆ ಹೋಗಬೇಕಾದರೆ ತಂದೆ-ತಾಯಿಗಳು ಹೆಗಲ ಮೇಲೆ ಹೊತ್ತು ಸಾಗುವರು. ಮತ್ತೊಂದೆಡೆ ಬಡತನ. ರವಿಕುಮಾರ್ ಎಲ್ಲರೂ ನನ್ನನ್ನು ಗುರುತಿಸುವಂತೆ ಸಾಧನೆ ಮಾಡಬೇಕು ಎನ್ನುವ ಹಂಬಲ ಮತ್ತು ಛಲದಿಂದ ಮೂರು ವರ್ಷಗಳಿಂದ ಚಿತ್ರ ಬಿಡಿಸುತ್ತಿದ್ದಾರೆ.

ADVERTISEMENT

ರವಿಕುಮಾರ್ ಉತ್ತಮ ಚಿತ್ರಗಳನ್ನು ಬಿಡಿಸಿ ಬಣ್ಣ ಹಾಕುವ ಕಲೆಯನ್ನು ಗಮನಿಸಿದ ಬಿಆರ್‌ಸಿ ಶಿವಶಂಕರ್‍ಹಾಗೂ ಬಿ.ಪರಮೇಶ್ವರಯ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಅವರಿಗೆ ವಿಷಯ ಮುಟ್ಟಿಸಿದರು. ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಸಂದರ್ಭದಲ್ಲಿ ರವಿಕುಮಾರ್‌ ಅವರನ್ನು ಗೌರವಿಸಲಾಯಿತು. ಶಾಸಕ ಮಸಾಲ ಜಯರಾಂ ಮತ್ತು ಜಿ.ಪಂ ಮಾಜಿ ಸದಸ್ಯ ಎನ್‍.ಆರ್‍. ಜಯರಾಂ ಬಾಲಕನ ಚಿತ್ರ ಬರವಣಿಗೆ ನೋಡಿ ಬೆನ್ನು ತಟ್ಟಿದರು.

ಶಿಕ್ಷಣ ಇಲಾಖೆಯಿಂದ ರವಿಕುಮಾರ್ ಬಿಡಿಸಿದ ಚಿತ್ರಗಳ ಕಿರು ಹೊತ್ತಿಗೆ ತರಲು ಮುಂದಾಗಿದೆ. ಪ್ರಸ್ತುತ ರವಿಕುಮಾರ್ ನೆಹರೂ ಕೇಂದ್ರೀಯ ವಿದ್ಯಾಶಾಲೆಯ ಗೃಹಾಧಾರಿತ ಮಗುವಾಗಿ ಮನೆಯಲ್ಲಿಯೇ ಎಂಟನೆ ತರಗತಿ ಓದುತ್ತಿದ್ದಾನೆ. ಮುಂದೆ ಒಳ್ಳೆಯ ಚಿತ್ರ ಬರಹಗಾರನಾಗಬೇಕೆಂಬ ಹಂಬಲ ಹೊಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.