ADVERTISEMENT

ಬಸ್‌ ಹತ್ತಿಸಿ, ಇಳಿಸುವುದು ಅಭಿವೃದ್ಧಿಯಲ್ಲ: ಸಂಸದ ಡಾ.ಸಿ.ಎನ್.ಮಂಜುನಾಥ್

ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಂಸದ ಡಾ.ಸಿ.ಎನ್.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:29 IST
Last Updated 4 ನವೆಂಬರ್ 2025, 5:29 IST
ಕುಣಿಗಲ್ ತಾಲ್ಲೂಕು ಯಾಚಘಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು
ಕುಣಿಗಲ್ ತಾಲ್ಲೂಕು ಯಾಚಘಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು   

ಕುಣಿಗಲ್: ‘ಬಸ್ ಹತ್ತಿಸಿ, ಇಳಿಸುವುದು ಅಭಿವೃದ್ಧಿಯಲ್ಲ. ಶಾಶ್ವತ ಯೋಜನೆಗಳ ಮೂಲಕ ಕೆರೆ ನಿರ್ಮಾಣ, ಜನತೆಗೆ ಶುದ್ಧ ಕುಡಿಯುವ ನೀರು, ಆರೋಗ್ಯ, ಗುಣಮಟ್ಟದ ಶಿಕ್ಷಣ, ರೈತರಿಗೆ ಅಗತ್ಯ ಸೌಲಭ್ಯ ನೀಡುವುದು ಅಭಿವೃದ್ಧಿಯ ಸಂಕೇತ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ತಾಲ್ಲೂಕಿನ ಯಾಚಘಟ್ಟ ಗ್ರಾಮದಲ್ಲಿ ಸೋಮವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಶೇ 50 ಅರೋಗ್ಯ ಸಮಸ್ಯೆಗಳು ಕುಲುಷಿತ ನೀರಿನಿಂದ ಬರುತ್ತಿದ್ದು, ತಾಲ್ಲೂಕಿನ ಹತ್ತು ಗ್ರಾಮಗಳಲ್ಲಿ ಸತ್ವ ಗ್ರೂಪ್‌ನ ಸಿಎಸ್ಆರ್ ನಿಧಿಯಿಂದ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುತ್ತಿದೆ. ತಾಲ್ಲೂಕಿನ ಹತ್ತು ಕಡೆ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.

ADVERTISEMENT

ಬೆಂಗಳೂರಿನ ಯಲಹಂಕದಲ್ಲಿ ₹500 ಕೋಟಿ ವೆಚ್ಚದಲ್ಲಿ ಪಾಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ವೈದ್ಯರು ದಾದಿಯರನ್ನು ನೇಮಕ ಮಾಡಿಕೊಳ್ಳುವುದರ ಜತೆಗೆ ವೈದ್ಯರ ವೇತನವನ್ನು ₹65 ಸಾವಿರಕ್ಕೇರಿಸಲಾಗಿದೆ. ದಾದಿಯರ ವೇತನವನ್ನು ₹22 ಸಾವಿರಕ್ಕೆ ಏರಿಸಲಾಗಿದೆ. ರಸಗೊಬ್ಬರದ ಬೆಲೆ ಇಳಿಸುವ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ
ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ಸಂಸದರು ತಾಲ್ಲೂಕಿಗೆ ಭೇಟಿ ನೀಡುತ್ತಿಲ್ಲ, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದವರು ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದನ್ನು ಅಧಿಕಾರಿಗಳು ಮರೆತಿದ್ದಾರೆ. ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನಪರ ಕೆಲಸ ಮಾಡುವುದನ್ನು ಮರೆತು ಶಾಸಕರ ಪರವಾಗಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡ ಡಾ.ಬಿ.ಎನ್.ರವಿ ಮಾತನಾಡಿ, ಡಿ.ಕೆ.ಸುರೇಶ್ ಹನ್ನೊಂದು ವರ್ಷ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅಭಿವೃದ್ಧಿ ಮಾಡುವುದಕ್ಕಿಂತಲೂ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಮಾತ್ರ ಕಾರ್ಯನಿರ್ವಹಿಸಿದ್ದಾರೆ ಹೊರತು ಸಂಸದರಾಗಿ ಕಾರ್ಯನಿರ್ವಹಿಸಿಲ್ಲ ಎಂದು ದೂರಿದರು.

ಸತ್ವ ಗ್ರೂಪ್‌ ಮುಖ್ಯಸ್ಥ ಸಂಜಯ್ ಅಗರ್ ವಾಲ್, ತರಿಕೆರೆ ಪ್ರಕಾಶ್, ಹರೀಶ್ ನಾಯಕ್, ಕುಮಾರ್ ಇದ್ದರು.

ಟೌನ್‌ಶಿಪ್‌ ಬದಲು ಚೀನಾ ಮಾದರಿಯಲ್ಲಿ ಬಹುಮಹಡಿ ನಿರ್ಮಿಸಿ

ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಬಗ್ಗೆ ತಾಲ್ಲೂಕಿನ ಜನತೆ ಜನಪ್ರತಿನಿಧಿ ಜತೆ ಯಾವುದೇ ಚರ್ಚೆ ನಡೆದಿಲ್ಲ. ಅದರ ಉದ್ದೇಶವೇ ಬೇರೆ ಇದೆ. ಟೌನ್‌ಶಿಪ್‌ ಮಾಡಿ ಎಂದು ಯಾರು ಕೇಳುತ್ತಿಲ್ಲ. ಬೆಂಗಳೂರಿನಲ್ಲಿ 3 ಲಕ್ಷ ಅಪಾರ್ಟ್‌ಮೆಂಟ್ ಜತೆಗೆ ಶಿವರಾಮ ಕಾರಂತ್ ಕೆಂಪೇಗೌಡ ಮತ್ತು ವೀಶ್ವೇಶ್ವರಯ್ಯ ಬಡಾವಣೆ ಖಾಲಿ ಬಿದ್ದಿವೆ. ಸರ್ಕಾರ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿ ಟೌನ್‌ಶಿಪ್‌ ನಿರ್ಮಿಸುವ ಬದಲು ಚೀನಾ ಮಾದರಿಯಲ್ಲಿ 50 ಎಕರೆ ಪ್ರದೇಶದಲ್ಲಿ ಬಹುಮಹಡಿಯ ಸಾವಿರಾರು ಮನೆಗಳನ್ನು ನಿರ್ಮಿಸಲಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.