ADVERTISEMENT

ಮಕ್ಕಳ ಕಲ್ಪನೆ ಕೊಲ್ಲುತ್ತಿರುವ ಶಿಕ್ಷಣ: ಸಾಹಿತಿ ಜೋಗಿ

ಬಿಳಿಗೆರೆ ಕೃಷ್ಣಮೂರ್ತಿ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 6:26 IST
Last Updated 12 ಆಗಸ್ಟ್ 2021, 6:26 IST
ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಪುಸ್ತಕವನ್ನು ಸಾಹಿತ್ಯಾಸಕ್ತರು ಖರೀದಿಸಿದರು
ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಪುಸ್ತಕವನ್ನು ಸಾಹಿತ್ಯಾಸಕ್ತರು ಖರೀದಿಸಿದರು   

ಹುಳಿಯಾರು: ‘ಕಲ್ಪನೆಯನ್ನು ಕೊಲ್ಲುವ ಶಿಕ್ಷಣ ನಮ್ಮ ಮುಂದಿರುವುದು ವಿಷಾದಕರ’ ಎಂದು ಸಾಹಿತಿ ಜೋಗಿ ಅಭಿಪ್ರಾಯಪಟ್ಟರು.

ಹುಳಿಯಾರು- ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಬಿಳಿಗೆರೆ ಕೃಷ್ಣಮೂರ್ತಿ ಅವರ ‘ಛೂಮಂತ್ರಯ್ಯನ ಕಥೆಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಆಧುನಿಕತೆಯ ಭರಾಟೆಗೆ ಉತ್ತರಿಸುವ ಭರದಲ್ಲಿ ಮಕ್ಕಳಿಗೆ ಕರಾರುವಕ್ಕುತನವನ್ನು ಕಲಿಸುತ್ತಿದ್ದೇವೆ. ಆದರೆ ಬದುಕು ಕರಾರುವಕ್ಕುತನದಿಂದ ಕೂಡಿರುವುದಿಲ್ಲ. ಕಲ್ಪನೆಯ ಲೋಕವನ್ನು ತೊಡೆದು ಹಾಕುವುದರ ಮೂಲಕ ಮಕ್ಕಳ ಬದುಕನ್ನು ನರಕವಾಗಿಸಿದ್ದೇವೆ ಎಂದರು.

ADVERTISEMENT

ಕೃತಿಯಲ್ಲಿ ಬರುವ ಛೂಮಂತ್ರಯ್ಯ ಎಂಬುವನು ತೇಜಸ್ವಿಯವರ ಮಂದಣ್ಣ ಹಾಗೂ ಕರ್ವಾಲೋ ಎರಡೂ ವ್ಯಕ್ತಿತ್ವದ ಅನುಭವ ಲೋಕದ ಮಿಶ್ರಣದಂತಿದೆ. ನಗರಕ್ಕಿಂತ ಭಿನ್ನವಾದ ಮತ್ತು ಸುಂದರವಾದ ಲೋಕವೊಂದು ಇದೆ ಎನ್ನುವುದನ್ನು ಕೃತಿ ಬಿಚ್ಚಿಡುತ್ತದೆ. ಸಂತೋಷದ ಮೂಲವನ್ನು ಈ ಕೃತಿ ಕಟ್ಟಿಕೊಡುತ್ತದೆ ಎಂದು ಹೇಳಿದರು.

ಕೃತಿಕಾರ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಹದಿಹರಯದ ಮಕ್ಕಳಿಗೆ ಸಾಹಿತ್ಯವೇ ಇಲ್ಲ. ಆ ಕೊರತೆಯನ್ನು ತುಂಬಿಸಲು ಈ ಕೃತಿಯ ಮೂಲಕ ಪ್ರಯತ್ನಿಸಿದ್ದೇನೆ ಎಂದರು.

ಸಹಜ ಕೃಷಿಕ ಶಿವನಂಜಯ್ಯ ಬಾಳಿಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ‘ಅನ್ವೇಷಣೆ’ ಪತ್ರಿಕೆ ಸಂಪಾದಕ ಆರ್.ಜಿ.ಹಳ್ಳಿ ನಾಗರಾಜ್, ವಿಮರ್ಶಕ ಬೆಳಗುಲಿ ಶಶಿಭೂಷಣ್, ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.