ಮಧುಗಿರಿ: ಬುಧವಾರ ಪಟ್ಟಣದ ಸಂತೆಗೆ ರೈತರು ಹಾಗೂ ವ್ಯಾಪಾರಿಗಳು ಹೊತ್ತು ತಂದಿದ್ದ ತರಕಾರಿ ಸಮೇತ ವಾಪಸ್ ಹೋಗಬೇಕಾಯಿತು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.17 ಮತ್ತು 18ರಂದು ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಸಂತೆ ನಡೆಸುವಂತಿಲ್ಲ ಎಂದು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವ್ಯಾಪಾರಿಗಳಿಗೆ ತಿಳಿಸಿದಾಗ, ‘ನಮಗೆ ಯಾರೂ ಮಾಹಿತಿ ಕೊಟ್ಟಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವಾರದಂತೆ ರೈತರು ತರಕಾರಿಗಳನ್ನು ಹೊತ್ತು ದೂರದ ಊರುಗಳಿಂದ ಸಂತೆ ಮೈದಾನದಲ್ಲಿ ಜಮಾವಣೆಗೊಂಡರು. ವ್ಯಾಪಾರಿಗಳು ದೂರದ ಊರುಗಳ ಮಾರುಕಟ್ಟೆಗಳಿಂದ ತರಕಾರಿಗಳನ್ನು ಖರೀದಿಸಿ ವ್ಯಾಪಾರ ಮಾಡಲು ಜಮಾಯಿಸಿದ್ದರು.
ಇಂದು ಸಂತೆ ನಡೆಯುವಂತಿಲ್ಲ. ಸೊಪ್ಪು, ತರಕಾರಿಗಳನ್ನು ಏನು ಮಾಡಬೇಕು. ಈ ಮಾಹಿತಿಯನ್ನು ಎರಡು - ಮೂರು ದಿನಗಳ ಹಿಂದೆಯೇ ತಿಳಿಸಿದ್ದರೆ ನಾವು ಬರುತ್ತಿರಲಿಲ್ಲ. ಈಗ ಎರಡು ದಿನಗಳ ಕಾಲ ತಾಲ್ಲೂಕಿನ ಸುತ್ತ - ಮುತ್ತ ಸಂತೆ ಇಲ್ಲದೆ ಇರುವುದರಿಂದ ತರಕಾರಿಯೂ ವ್ಯರ್ಥ, ಹಣ ಕೂಡ ಖರ್ಚು ಮಾಡಿದ್ದೇವೆಂದು ಅಧಿಕಾರಿಗಳ ಮುಂದೆ ರೈತರು ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದರು. ಇನ್ನು ತರಕಾರಿ ಕೊಳ್ಳಲು ಬಂದಿದ್ದ ಜನ ಖಾಲಿ ಮೈದಾನ ನೋಡಿಕೊಂಡು ಖಾಲಿ ಕೈಯಲ್ಲಿ ಮನೆಗೆ ತೆಳಿದರು.
ಸ್ಥಳಕ್ಕೆ ಸಿಪಿಐ ದಯಾನಂದ ಶೇಗುಣಸಿ, ಪಿಎಸ್ಐ ವಿಜಯ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೋಹಿತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.