ತುಮಕೂರು: ತುಮಕೂರು ತಾಲ್ಲೂಕಿನ ಕೋಳಿಹಳ್ಳಿಗೆ ಸೋಮವಾರ ಬೆಳಿಗ್ಗೆ ಬಂದಿದ್ದ ಒಂಟಿ ಸಲಗವೊಂದು ಮುತ್ತಪ್ಪ(70) ಎಂಬ ವೃದ್ಧರನ್ನು ಗಾಯಗೊಳಿಸಿದೆ.
ಆನೆ ಈಗ ಹಿರೇಹಳ್ಳಿ ಬಳಿಯ ಅಡಕೆ ಹಾಗೂ ತೆಂಗಿನ ತೋಟದಲ್ಲಿ ಅಡ್ಡಾಡುತ್ತಿದೆ.ಮೂರು ಆನೆಗಳು ಬಂದಿವೆ ಎಂಬ ಮಾಹಿತಿ ಇದೆ. ವ್ಯಕ್ತಿ ಮೇಲೆ ದಾಳಿ ಮಾಡಿದ ಆನೆಯೊಂದೆ ನಮಗೆ ಕಾಣಿಸುತ್ತಿದೆ. ಅದನ್ನು ನಾವು ಓಡಿಸುವ ಕಾರ್ಯಾಚರಣೆ ಮಾಡುವುದಿಲ್ಲ. ಸಂಜೆ ಆದ ಬಳಿಕ ಅದು ತಾನಾಗಿಯೇ ಅರಣ್ಯದೆಡೆಗೆ ಹೋಗುವವರೆಗೂ ಕಣ್ಣಿಡುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ಗಿರೀಶ್ ಅವರು ಪ್ರಜಾವಾಣಿಗೆ ತಿಳಿಸಿದರು.
ಮುತ್ತಪ್ಪ ಅವರನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುತ್ತಪ್ಪ ಅವರ ಕೈ, ಕಾಲು ಮೂಳೆಗಳು ಮುರಿದಿವೆ. ಎದೆ, ಹೊಟ್ಟೆ, ಸೊಂಟದ ಭಾಗಕ್ಕೂ ಪೆಟ್ಟಾಗಿದೆ. ಸದ್ಯ ತುರ್ತು ನಿಗಾ ಘಟಕದಲ್ಲಿ(ಐಸಿಯು) ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸ್ಟಾಫ್ ನರ್ಸ್ ವಿಜಯಾ ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.ಮುತ್ತಪ್ಪ ಅವರಿಗೆ ವೈದ್ಯರಾದ ಡಾ.ತ್ಯಾಗರಾಜ್, ಡಾ.ಪ್ರವೀಣ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.