ಶಿರಾ: ‘ಎಎಪಿ ಅಭ್ಯರ್ಥಿಗಳನ್ನು ನಗರಸಭೆಯಲ್ಲಿ ಗೆಲ್ಲಿಸಿದರೆ ದೆಹಲಿ ಮಾದರಿಯಲ್ಲಿ ಭ್ರಷ್ಟಾಚಾರ ಮುಕ್ತವಾದಜನಸೇವೆ ಮಾಡಲು ಒತ್ತು ನೀಡಲಾಗುವುದು’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಜಗದೀಶ್ ಹೇಳಿದರು.
ನಗರದಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಇಲ್ಲಿಯವರೆಗೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಸಿದ್ದಾರೆ. ಆಮ್ ಆದ್ಮಿ ಪಕ್ಷ ಪ್ರಥಮ ಬಾರಿಗೆ ಸ್ಥಳೀಯವಾಗಿ ಚುನಾವಣೆಗೆ ಇಳಿಯುತ್ತಿದೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ಕೋರಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಕಳೆದ 7 ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ನೀಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಉಚಿತ ಬಸ್ಪಾಸ್ ನೀಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಜನರಿಗಾಗಿಯೇ ಖರ್ಚು ಮಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದಾರೆ ಎಂದು
ಹೇಳಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ‘ಶಿರಾ ನಗರಸಭೆಗೆ ಜನತೆ ವಾರ್ಷಿಕವಾಗಿ ಸುಮಾರು ₹ 33 ಕೋಟಿ ಕಂದಾಯ ಪಾವತಿಸುತ್ತಾರೆ. ಆದರೆ, ನಗರಸಭೆ ಆಡಳಿತ ಇಲ್ಲಿಯವರೆಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಪ್ರಥಮ ಬಾರಿಗೆ ಪಕ್ಷವು ಚುನಾವಣೆಗೆ ಸ್ವರ್ಧೆ ಮಾಡುತ್ತಿದೆ. ಜನತೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಪರಮೇಶ್, ಮುಖಂಡರಾದ ಪ್ರವೀಣ್, ಉಮರ್, ಭೀಮರಾಜು, ಸಾದಿಕ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.