ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ಕರ್ನಾಟಕ ರಾಜ್ಯಅನುದಾನಿತ ಶಾಲೆಗಳ ಪಿಂಚಣಿ ವಂಚಿತ ನೌಕರರ ಸಂಘ’ವು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದ ಪಿಂಚಣಿ ವಂಚಿತ ನೌಕರರ ಜಾಥಾಕ್ಕೆ ಸಿದ್ಧಗಂಗಾ ಮಠದ ಆವರಣದಲ್ಲಿ ಸಿದ್ಧಲಿಂಗಸ್ವಾಮೀಜಿ ಅವರು ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ರವಿ, 2006 ರ ನಂತರ ಸರ್ಕಾರಿ ನೌಕರಿಗೆ ಸೇರಿದವರಿಗೆ ಸರಕಾರ ಅವೈಜ್ಞಾನಿಕವಾದ ಎನ್ಪಿಎಸ್ ಮೂಲಕ ಪಿಂಚಿಣಿ ನೀಡುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಅನುದಾನಿತ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಮಾತ್ರ ಯಾವುದೇ ಪಿಂಚಣಿ ಸೌಲಭ್ಯವಿಲ್ಲ. ಈ ರೀತಿಯ ತಾರತಮ್ಯ ಸರಿಯಲ್ಲ ಎಂದು ಆಗ್ರಹಿಸಿದರು.
ಫಲಿತಾಂಶ ಕಡಿಮೆಯಾದರೆ ಅನುದಾನಿತ ಶಾಲೆಗಳ ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಜರುಗಿಸುವ ಸರ್ಕಾರ ಸವಲತ್ತುಗಳನ್ನು ನೀಡುವಲ್ಲಿ ಮಾತ್ರ ತಾರತಮ್ಯ ಎಣಿಸುತ್ತಿದೆ. ಅನುದಾನಿತ ಶಾಲಾ, ಕಾಲೇಜು ಸಿಬ್ಬಂದಿಯನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಇದರ ವಿರುದ್ದ ಹೋರಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಆಶೀರ್ವಾದ ಪಡೆದು ಹೊರಟಿದ್ದು, ನ್ಯಾಯ ದೊರೆಯಲಿದೆ ಎಂಬ ನಂಬಿಕೆ ಇದೆ ಎಂದರು.
ಸಂಘದಸಂಘಟನಾ ಕಾರ್ಯದರ್ಶಿ ಶಶಿಧರ್, ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಂದ್ರ ಪ್ರಸಾದ್, ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳಾದ ಹನುಮೇಶ್, ರವೀಶ್, ಮಧುಸೂಧನ್, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.