ADVERTISEMENT

ಮಕ್ಕಳು, ಮಹಿಳೆ ಮೇಲೆ ದೌರ್ಜನ್ಯ ತಡೆ ಎಲ್ಲರ ಹೊಣೆ

ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಡಿಪಿಓ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 9:46 IST
Last Updated 12 ಜುಲೈ 2019, 9:46 IST

ತುಮಕೂರು: ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಲೈಂಗಿಕ ಶೋಷಣೆ ತಡೆಯುವ ಹೊಣೆ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ’ ಎಂದು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಧರ್ ಹೇಳಿದರು.

ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಮೊದಲ ಇಬ್ಬರು ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಸರ್ಕಾರದಿಂದ ₹ 1 ಲಕ್ಷ ಭಾಗ್ಯ ಲಕ್ಷ್ಮಿ ಬಾಂಡ್‌ನ್ನು ಫಲಾನುಭವಿಗಳಿಗೆ ನೀಡಲಾಗುವುದು. ಹೆಣ್ಣು ಮಗು 8ನೇ ತರಗತಿಯವರೆಗೆ ಅಂಗೀಕೃತ ಶಾಲೆಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ಪಡೆದರೆ ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಮಗುವಿನ ತಂದೆ, ತಾಯಿ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಪಡೆದು ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ತಾಯಿ ಮಗು ಭಾವಚಿತ್ರ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಬೇಕು ಎಂದು ಮಾಹಿತಿ ಮಾಡಿದರು.

ADVERTISEMENT

ಮಹಿಳಾ ದೌರ್ಜನ್ಯ ಪ್ರಕರಣಗಳು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಮಕ್ಕಳ ರಕ್ಷಣಾಧಿಕಾರಿ ಗೌತಮ್ ಮಾತನಾಡಿ, ‘ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಲಾಗುವುದು. ಮಕ್ಕಳ ಪಾಲನೆ ಹಾಗೂ ಪೋಷಣೆ ಇಲಾಖೆಯ ಜವಾಬ್ದಾರಿಯಾಗಿರುತ್ತದೆ’ ಎಂದು ಹೇಳಿದರು.

ಕುಟುಂಬದಿಂದ ಹೊರಗುಳಿದ ಮಕ್ಕಳು, ಬಡತನದಿಂದ ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ್ಯ ವಿವಾಹವಾಗಿರುವ ಮಕ್ಕಳು, ಎಲ್ಲ ಮಕ್ಕಳಿಗೂ ಬಾಲ ಮಂದಿರದಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಬಾಲಮಂದಿರದಲ್ಲಿ ಒಟ್ಟು 7 ಬಾಲಕರು ಹಾಗೂ 40 ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಎಸ್ಸೆಎಸ್ಸೆಲ್ಸಿ ಅನುತ್ತೀರ್ಣರಾದ ಮಕ್ಕಳಿಗೆ ಬೆಂಗಳೂರಿನ ಅಪ್ಸಾ ಸಂಸ್ಥೆಯಿಂದ ವೃತ್ತಿಪರ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಮ್ಮ, ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಬಿಇಓ ರಂಗಧಾಮಪ್ಪ,ಆರೋಗ್ಯಾಧಿಕಾರಿ ಡಾ. ಶರತ್‌ಬಾಬು, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಹಸಿನಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.